ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ.
ಯಲಗೊಪ್ಪಾದ ಧನ್ವಂತರಿ ಬಳಿ ಹೆದ್ದಾರಿಯಲ್ಲಿ ಕಡವೆಯೊಂದು ನಿಂತಿದ್ದು, ಇದನ್ನು ಗಮನಿಸದೇ ಕಾರು ಚಾಲಕ ವಾಹನ ಚಲಾಯಿಸಿದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಡವೆ ನರಳಾಡುತ್ತಾ ಧನ್ವಂತರಿ ದೇವಸ್ಥಾನದ ಸಮೀಪ ಕೆರೆಯಲ್ಲಿ ಓಡಾಡಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಡಿಎಫ್ಓ ಯೋಗೇಶ, ಆರ್ಎಫ್ಓ ಸವಿತಾ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಡವೆಯನ್ನು ಗಮನಿಸಿ ಕೆರೆಯ ಮಣ್ಣು ತೆರವುಗೊಳಿಸಿ ಕಡವೆ ರಕ್ಷಣೆ ಮಾಡಿದ್ದಾರೆ. ಕಡವೆ ಗಾಯಗೊಂಡಿದ್ದ ಹಿನ್ನಲೆ ಅದು ಕಾಡಿಗೆ ತೆರಳುವವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಹಾಜರಿದ್ದು ಯಾರೂ ಬೇಟೆಯಾಡದಂತೆ ರಕ್ಷಣೆ ನೀಡಿದ್ದಾರೆ.
ಘಟನೆ ಸಂಬಂಧ ಕಡವೆಗೆ ಅಪಘಾತಪಡಿಸಿದ ತಾಲ್ಲೂಕಿನ ಜಲವಳ್ಳಿ ನಿವಾಸಿ ರೋಹಿದಾಸ್ ಶಿವಕುಮಾರ ನಾಯ್ಕ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಗಳಲ್ಲಿ ವನ್ಯಜೀವಿಗಳಿಗೆ ಅಪಘಾತಪಡಿಸಿ ಪರಾರಿಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.