Actor Darshan | ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್ ಅರೆಸ್ಟ್ ಟು ಬೇಲ್ ವರೆಗೆ ನಡೆದ ಕಂಪ್ಲಿಟ್ ಸ್ಟೋರಿ ಇಲ್ಲಿದೆ
ಏನಿದು ಪ್ರಕರಣ?
ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿಯ ಚರಂಡಿಯ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಹಣಕಾಸಿನ ವಿವಾದಕ್ಕೆ ರೇಣುಕಾಸ್ವಾಮಿಯನ್ನು ನಾವೇ ಕೊಲೆ ಮಾಡಿದ್ದು ಎ೦ದು ನಾಲ್ವರು ಯುವಕರು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಶರಣಾಗಿದ್ದರು. ವಿಚಾರಣೆ ವೇಳೆ ಇವರು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಪ್ರಸ್ತಾಪ ಮಾಡಿದ್ದರು.
ಇದನ್ನೂ ಓದಿ: BIG BREAKING: ರೇಣುಕಾ ಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನು
ನಟ ದರ್ಶನ್ ಬಂಧನ ( Actor Darshan Arrest)
ಜೂನ್ 11ರಂದು ಪೋಲಿಸರು ನಟ ದರ್ಶನ್ ಅವರನ್ನು ಮೈಸೂರಿನ ಹೋಟೆಲ್ವೊಂದರಲ್ಲಿ ಬ೦ಧಿಸಿದರು. ಜೊತೆಗೆ ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ 14 ಮಂದಿಯನ್ನು ರೇಣುಕಾಸ್ವಾಮಿ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಲಯದ ಮು೦ದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದರು.
ಕೊಲೆಗೆ ಕಾರಣವೇನು?
ನಟ ದರ್ಶನ್ ಗೆಳತಿ ಪವಿತ್ರ ಗೌಡ ಅವರಿಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ದರ್ಶನ್, ರೇಣುಕಾಸ್ವಾಮಿಯನ್ನು ಅಪಹರಣ ಮಾಡುವಂತೆ ಸೂಚಿಸಿದ್ದರು. ನಂತರ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್ ಆರ್ ನಗರದ ಶೆಡ್ಗೆ ಕರೆತಂದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
Actor Darshan ವಿಚಾರಣಾಧೀನ ಖೈದಿ
ಜೂನ್ 16 ರಂದು ನ್ಯಾಯಾಲಯವು ಎಲ್ಲಾ ಶಂಕಿತರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿತು.
ಜೈಲು ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣಾಧೀನ ಖೈದಿ ಎಂದು ಹೆಸರಿಸಿ 6106 ಸಂಖ್ಯೆಯನ್ನು ನಿಗದಿಪಡಿಸಿದರು. ಆರಂಭದಲ್ಲಿ ಅವರನ್ನು ಹೆಚ್ಚಿನ ಭದ್ರತೆಯ ಸೆಲ್ನಲ್ಲಿ ಇರಿಸಲಾಗಿತ್ತು ನಂತರ ಬ್ಯಾರಕ್ಗೆ ತೆರಳುವ ಮೊದಲು ಜೈಲು ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಇದನ್ನೂ ಓದಿ: Darshan Bail: ದರ್ಶನ್ಗೆ ಬೇಲ್ ಸಿಕ್ಕ ಬೆನ್ನಲ್ಲೇ ಫೋಟೋ ಹಾಕಿ ಸಂತಸ ವ್ಯಕ್ತಪಡಿಸಿದ ಪತ್ನಿ!
ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್
ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನನ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ, ನಗುತ್ತಾ ಮಾತನಾಡುತ್ತಿರುವ ಫೋಟೋ ವೈರಲ್ ಆಯಿತು. ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.
ದರ್ಶನ್ ಗೆ ಮಧ್ಯಂತರ ಜಾಮೀನು (Actor Darshan Bail)
ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆನ್ನು ನೋವು ಹಿನ್ನೆಲೆಯಲ್ಲಿ ದರ್ಶನ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ವಾದ ಮಾಡಿದರು. ಈ ಹಿನ್ನಲೆ ಅಕ್ಟೋಬರ್ 30ರಂದು ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದರು.
ರೆಗ್ಯುಲರ್ ಜಾಮೀನು ಮಂಜೂರು
ನಟ ದರ್ಶನ್, ಪವಿತ್ರ ಗೌಡ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 9ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ಡಿಸೆಂಬರ್ 13 ರಂದು ತೀರ್ಪು ನೀಡಿದೆ. ಕೋರ್ಟ್ ಅನುಮತಿ ಇಲ್ಲದೆ ಆರೋಪಿಗಳು ಬೆಂಗಳೂರು ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಿದೆ.
ಇದನ್ನೂ ಓದಿ: BIG BREAKING: ರೇಣುಕಾ ಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನು