ಮೈಸೂರು: ಮನೆಯಿಂದ ಅಣ್ಣ ಹೊರಹಾಕಿದನೆಂದು ಮನನೊಂದು ತಮ್ಮ ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ. ಸಿದ್ಧರಾಜು(32) ಮೃತ ದುರ್ದೈವಿಯಾಗಿದ್ದಾನೆ.
ಮೃತ ಸಿದ್ಧರಾಜು ಮನೆಯ ವಿದ್ಯುತ್ ಬಿಲ್ ಪಾವತಿಸಿ ಬಂದಿದ್ದು, ಮನೆಗೆ ಬಂದ ಬಳಿಕ ಅಣ್ಣನ ಬಳಿ ವಿದ್ಯುತ್ ಬಿಲ್ ತುಂಬಿದ 200 ರೂಪಾಯಿ ಹಣವನ್ನು ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಪರಸ್ಪರ ಜಗಳವಾಗಿದ್ದು, ತಮ್ಮನ ಮೇಲೆ ಹಲ್ಲೆ ಮಾಡಿದ ಅಣ್ಣ, ಮನೆಯಿಂದ ಹೊರದಬ್ಬಿ ಕಳುಹಿಸಿದ್ದಾನೆ.
ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡ ಸಿದ್ಧರಾಜು ಗ್ರಾಮದ ಹೊರವಲಯಕ್ಕೆ ತೆರಳಿ ಅಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಗ್ರಾಮಸ್ಥರಿಗೆ ಆತ್ಮಹತ್ಯೆ ವಿಚಾರ ಗೊತ್ತಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಜಯಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕಾಸ್ಪತ್ರೆಗೆ ರವಾನಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.