ಭಟ್ಕಳ: ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದರೆ ಇನ್ನೊಂದು ಪ್ರಕರಣದಲ್ಲಿ ಬಂಗಾರಮಕ್ಕಿ ಕ್ರಾಸ್ ಬಳಿ ವ್ಯಕ್ತಿ ಮೇಲೆ ಹೆಜ್ಜೇನು ದಾಳಿ ಮಾಡಿರುವ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ನಡೆದಿದೆ.
ಹೆಜ್ಜೇನು ದಾಳಿಗೊಳಗಾದವರನ್ನು ಮೂವರನ್ನು ಮಾಸ್ತಮ್ಮ ಮಂಜಪ್ಪ ನಾಯ್ಕ(70) ಜಾನಕಿ ನಾಯ್ಕ(37) ಸುರೇಶ ನಾಯ್ಕ(45) ಇವರು ಮಂಗಳವಾರ ತಮ್ಮ ಮನೆಯಲ್ಲಿರುವ ವೇಳೆ ಏಕಾಏಕಿ ಇಲ್ಲಿಂದಲೋ ಬಂದ ಹೆಜ್ಜೇನು ಮನೆಯ ಒಳಗಡೆ ಇದ್ದ ಮೂವರ ಮೇಲೆ ದಾಳಿ ಮಾಡಿದೆ.
ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ 70 ವರ್ಷದ ವೃದ್ದೆ ಸ್ಥಿತಿ ಗಂಭೀರವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿರುವ ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇನ್ನಿಬ್ಬರು ಕೂಡ ಭಟ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಗಣಪತಿ ಮಂಜಯ್ಯ ನಾಯ್ಕ (55) ಮಲ್ಲಾರಿಯ ತಮ್ಮ ಮನೆಯಿಂದ ಮಾರುಕಟ್ಟೆಗೆಂದು ಬರುತ್ತಿದ್ದ ವೇಳೆ ಶಿರಾಲಿಯ ಬಂಗಾರಮಕ್ಕಿ ಕ್ರಾಸ್ ಸಮೀಪ ಜೇನು ಹುಳುಗಳು ದಾಳಿ ಮಾಡಿದೆ. ಈತ ಕೂಡ ಸದ್ಯ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.