ತುಮಕೂರು: ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುಜಾರಿ ಬಂಡೆಗಳ ಮದ್ಯೆ ಬಿದ್ದಿದ್ದ ತುಮಕೂರಿನ ಯುವತಿಯನ್ನು ಒಂದು ದಿನದ ಬಳಿಕ ಕೊನೆಗೂ ರಕ್ಷಣೆ ಮಾಡಲಾಗಿದೆ. ಹಂಸ(20) ರಕ್ಷಣೆಗೊಳಗಾದ ವಿದ್ಯಾರ್ಥಿನಿಯಾಗಿದ್ದಾಳೆ.
ಭಾನುವಾರ ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳಕೆರೆ ಕೋಡಿ ಬಿದ್ದ ಸ್ಥಳದಲ್ಲಿ ವಿದ್ಯಾರ್ಥಿನಿಹಂಸ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ಕಾಲು ಜಾರಿ ಕೆಳಗೆಬಿದ್ದಿದ್ದಳು. ಈ ವೇಳೆ ಯುವತಿಗಾಗಿ ಸಂಜೆಯವರೆಗೂ ಹುಡುಕಾಟ ನಡೆಸಲಾಗಿತ್ತಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕೆರೆಕೋಡಿ ಬಿದ್ದ ಪ್ರದೇಶದಲ್ಲಿ ಬೃಹತ್ ಬಂಡೆಗಳು ಇದ್ದ ಹಿನ್ನಲೆ ಬಂಡೆಗಳ ನಡುವೆ ಹಂಸ ಸಿಲುಕಿರಬಹುದೆಂದು ಅಂದಾಜಿಸಲಾಗಿತ್ತು. ಅಲ್ಲದೇ ಕೆರೆ ನೀರಿನ ಹರಿವು ಸಹ ಹೆಚ್ಚಿದ್ದ ಹಿನ್ನಲೆ ಹಂಸ ಮೃತಪಟ್ಟಿರಬಹುದು ಎಂದೂ ಸಹ ಶಂಕಿಸಲಾಗಿತ್ತು.
ಅದರಂತೆ ಸೋಮವಾರ ಕಾರ್ಯಾಚರಣೆ ಮುಂದುವರೆಸಿದ ರಕ್ಷಣಾ ತಂಡಗಳು ಕೆರೆಕೋಡಿಯ ಹರಿವಿನ ದಿಕ್ಕನ್ನು ಬದಲಿಸಿಕೊಂಡು ಬಂಡೆಗಳಿದ್ದ ಪ್ರದೇಶದಲ್ಲಿ ಇಳಿದಿದ್ದರು. ಈ ವೇಳೆ ಬಂಡೆಗಳ ನಡುವೆ ಹಂಸ ಜೀವಂತವಾಗಿ ಪತ್ತೆಯಾಗಿದ್ದು ಅವರ ಕುತ್ತಿಗೆಯ ಎತ್ತರದವರೆಗೆ ನೀರು ಹರಿಯುತ್ತಿತ್ತು.
ಕೊನೆಗೂ ಸತತ 12 ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದ್ದು ಹಂಸಳನ್ನು ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು. ರಾತ್ರಿಯಿಡೀ ನೀರಿನಲ್ಲಿದ್ದು ಅಸ್ವಸ್ಥರಾಗಿದ್ದ ಹಿನ್ನಲೆ ಅವರನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ.