ವಿಜಯಪ್ರಭ ವಿಶೇಷ, ದಾವಣಗೆರೆ: ಸದ್ಯ ದೇಶದಲ್ಲೇ ಮೊದಲ ಉಚಿತ ಖಾಸಗಿ ಲಸಿಕಾ ವಿತರಣೆಗೆ ದೇವನಗರಿ ದಾವಣಗೆರೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ನ ಹಿರಿಯ ಮುಖಂಡ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇದಕ್ಕೆ ಮುನ್ನುಡಿ ಬರೆದಿದ್ದಾರೆ.
ನಗರದಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಲಸಿಕೆ ಹಾಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಖಾಸಗಿಯಾಗಿ ಉಚಿತ ಲಸಿಕಾ ವಿತರಣೆ ಮಾಡುತ್ತಿರುವುದು ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾತು ಕೊಟ್ಟಂತೆ ನಡೆದುಕೊಂಡ ತಂದೆ, ಮಗ
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಹೇಳಿಕೆಗೆ ಸ್ಪಷ್ಟೀಕರಣ ಕೊಡಲು ಈಚೆಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕ್ಷೇತ್ರದ ಜನರಿಗೆ ನಾವು ಉಚಿತ ಲಸಿಕೆ ನೀಡಲು ಸಿದ್ಧರಿದ್ದೇವೆ. ಸಂಸದ ಸಿದ್ದೇಶ್ವರ್ ರೆಡಿ ಇದ್ದಾರೆ. ಈ ಕ್ಷೇತ್ರದಕ್ಕೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿ ಸವಾಲು ಹಾಕಿದ್ದರು.
ಅದರಂತೆ ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 60 ಸಾವಿರ ಕೋವಿಶೀಲ್ಡ್ ಲಸಿಕೆ ಖರೀದಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತುಕೊಟ್ಟಂತೆ ನಡೆದುಕೊಂಡು ಕ್ಷೇತ್ರದ ಜನರಿಂದ ಸೈ ಎನಿಸಿಕೊಂಡಿದ್ದಾರೆ.
ಸಂಸದ ಸಿದ್ದೇಶ್ವರ್ ಕತೆ ಏನು?
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು, ಮೊದಲು ಅವರು ಹೇಳಿದಂತೆ ನಡೆದುಕೊಳ್ಳಲಿ ಎಂದು ಹೇಳಿದ್ದರು. ಸದ್ಯ ಎಸ್.ಎಸ್.ಮಲ್ಲಿಕಾರ್ಜುನ್ ನುಡಿದಂತೆ ನಡೆದುಕೊಂಡಿದ್ದು, ಈಗ ಪ್ರತಿಯಾಗಿ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಸಂಸದ ಸಿದ್ದೇಶ್ವರ್ ಅವರ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸಂಸದ ಸಿದ್ದೇಶ್ವರ್ ಮೇಲೆ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಆರೋಪ ಏನು?
ಕರೋನ ಎರಡನೇ ಅಲೆ ತಡೆಯುವಲ್ಲಿ ಸಂಸದ ಸಿದ್ದೇಶ್ವರ್ ಸಂಪೂರ್ಣ ವಿಫಲರಾಗಿದ್ದಾರೆ. ಇನ್ನೊಂದೆಡೆ ಕೆಲಸ ಮಾಡಲು ಅಧಿಕಾರಿಗಳನ್ನು ಕೂಡ ಬಿಡುತ್ತಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ.
ಸಿದ್ದೇಶ್ವರ್ ಮೊದಲು ರಾಜ್ಯಕ್ಕೆ ರೆಮ್ಡಿಸಿವಿರ್, ಆಕ್ಸಿಜನ್, ತರಬೇಕು. ಅದನ್ನು ಯಾರ ಮುಂದೆ ಮಂಡಿಯೂರಿ ತರುತ್ತಾರೋ, ಕೊರಳಪಟ್ಟಿ ಹಿಡಿದು ತರುತ್ತಾರೋ ಅಥವಾ ದೆಹಲಿಯಲ್ಲಿ ಕುಳಿತು ತರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಕೋವಿಡ್ನಿಂದ ಜನರನ್ನು ರಕ್ಷಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದರು.