ನವದೆಹಲಿ: ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದೆ.
ದೈಹಿಕ ನ್ಯೂನತೆ ಬಗ್ಗೆ ಸುಳ್ಳು ಹೇಳಿ ನಕಲಿ ಒಬಿಸಿ ಪ್ರಮಾಣಪತ್ರವನ್ನು ಮಾಡಿಸಿಕೊಂಡಿದ್ದ ಆರೋಪ ಪೂಜಾ ಖೇಡ್ಕರ್ ಮೇಲಿದೆ. ಈ ಸಂಬಂಧ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಆಕೆಯ ಉದ್ದೇಶಗಳು ಅಧಿಕಾರಿಗಳನ್ನು ವಂಚಿಸುವುದಾಗಿತ್ತು. ಅವಳ ನಿರ್ಧಾರ ದೊಡ್ಡ ಪಿತೂರಿಯ ಭಾಗವಾಗಿತ್ತು ಎಂದು ಹೇಳಿದೆ.
ಇನ್ನು ಕಳೆದ ತಿಂಗಳು ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಆಕೆಯ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ನಡೆದಿದ್ದ ಪ್ರಾಥಮಿಕ ತನಿಖೆ ವೇಳೆ ಆಕೆ ತಪ್ಪಿತಸ್ಥೆ ಎಂದು ಕಂಡು ಬಂದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು.