ವಿಜಯನಗರ: ಸೂಕ್ತ ಚಿಕಿತ್ಸೆ ಸಿಗದೇ 5 ವರ್ಷದ ಮಗು ಸಾವನ್ನಪ್ಪಿದ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಹೊಸಪೇಟೆಯ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಕುಶಾಲ್(5) ಕೊನೆಯುಸಿರೆಳೆದಿರುವ ಮಗು.
ತಾಲ್ಲೂಕಿನ ಕಮಲಾಪುರದ ಅಂಬೇಡ್ಕರ್ ನಗರದ ಶಾಂತಪ್ಪ ಮತ್ತು ಶಂಕ್ರಮ್ಮ ದಂಪತಿಯ ಮಗು ಕುಶಾಲ್ನಿಗೆ ತೀವ್ರ ಜ್ವರ ಬಂದಿದ್ದು, ಬೆಳಿಗ್ಗೆ 7 ಗಂಟೆಗೆ ಆಸ್ಪತ್ರೆಗೆ ತೆರಳಿದಾಗ ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮಗುವಿಗೆ ಜ್ವರ ಹೆಚ್ಚಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿಯೂ ಮಗುವನ್ನು ತಪಾಸಣೆ ಮಾಡಿ ಸರ್ಕಾರಿ ಆಸ್ಪತ್ರೆಗೆ ವಾಪಾಸ್ ಕಳುಹಿಸಿದ್ದಾರೆ.
ಆದರೆ ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಾಗಲೇ ಮಗುವಿಗೆ ಜ್ವರ ತೀವ್ರಗೊಂಡಿದ್ದು ಮಗು ಕೊನೆಯುಸಿರೆಳೆದಿದೆ. ಅಕ್ಟೋಬರ್ 24 ರಂದು ಸರ್ಕಾರಿ ಆಸ್ಪತ್ರೆಗೆ ಬಂದು ಜ್ವರದಿಂದ ಬಳಲುತ್ತಿದ್ದ ಕುಶಾಲ್ನಿಗೆ ಚಿಕಿತ್ಸೆ ಕೊಡಿಸಿಕೊಂಡು ತೆರಳಿದ್ದರು. ಈ ವೇಳೆ ಮಗು ಹುಷಾರಾಗಿದ್ದು, ಏನೂ ತೊಂದರೆ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ಕಳುಹಿಸಿಕೊಟ್ಟಿದ್ದರು. ಆದರೆ ಬೆಳಗಿನ ವೇಳೆಗೆ ಮಗುವಿಗೆ ಜ್ವರ ಹೆಚ್ಚಾಗಿದ್ದು ಆಸ್ಪತ್ರೆಗೆ ಬಂದಾಗ ವೈದ್ಯರು ಇಲ್ಲದ್ದರಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಒಂದೇ ಗಂಡು ಮಗು ಜನಿಸಿತ್ತು. ಇದೀಗ ವೈದ್ಯರಿಲ್ಲದ ಕಾರಣದಿಂದಲೇ ಚಿಕಿತ್ಸೆ ಸಿಗದೇ ಮಗುವನ್ನು ಕಳೆದುಕೊಂಡಂತಾಗಿದೆ ಎಂದು ಆಸ್ಪತ್ರೆಯ ಆವರಣದಲ್ಲಿ ಮಗುವಿನ ತಾಯಿ ಹಾಗೂ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಬಡಾವಣೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.