ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾದ ಬಳಿಕ ತೆರವಾದ ಎಂಎಲ್ಸಿ ಸ್ಥಾನಕ್ಕೆ ಅ.21ರಂದು ಉಪ ಚುನಾವಣೆ ನಡೆಯಲಿದ್ದು, ಇದಕ್ಕೆ ಕಸ್ತೂರಿರಂಗನ್ ವರದಿ ಅಡ್ಡಿಯಾಗಿದೆ.
ಹೌದು, ಕಸ್ತೂರಿರಂಗನ್ ವರದಿಯಿಂದ ಒಕ್ಕಲಬ್ಬಿಸುವ ಆತಂಕ ಸೃಷ್ಟಿಯಾಗಿದ್ದು, ಕುಂದಾಪುರ, ಬೈಂದೂರು ಭಾಗದ ಅನೇಕ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಜನಪ್ರತಿನಿಧಿಗಳ ವಿಧಾನ ಪರಿಷತ್ ಉಪಚುನಾವಣೆಗೆ ಗ್ರಾಪಂ ಸದಸ್ಯರೇ ಮತದಾರರಾಗಿದ್ದು, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಭಾಗದಲ್ಲಿ ಬಹಿಷ್ಕಾರದ ಬಿಸಿ ಮುಟ್ಟಿಸಿದ್ದಾರೆ. ಈ ಹಿನ್ನಲೆ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ.
ಪ್ರತ್ಯೇಕ ಸರ್ವೆಗೆ ಸರ್ಕಾರ ಒಪ್ಪಿಗೆ: ಸಂಸದ ಪೂಜಾರಿ
ರಾಜ್ಯದಲ್ಲಿ 16 ಸಾವಿರ ಚದರ ಕಿಲೋ ಮೀಟರ್ ಪ್ರದೇಶ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುತ್ತೆ. ಗ್ರಾಮದ ಬಡ ಜನರಿಗೆ ಮನೆ ಕಟ್ಟಲು, ಕೃಷಿ ನಡೆಸಲು ಅಡ್ಡಿಯಾಗುತ್ತಿದೆ. ಅಡಿಕೆ ತೋಟ, ತೆಂಗಿನ ತೋಟ ಎಲ್ಲವನ್ನು ಕೂಡ ಈ ವರದಿಯಲ್ಲಿ ಕಾಡು ಎಂದು ಪರಿಗಣಿಸಿದ್ದಾರೆ. ಕಾಡು ಯಾವುದು? ನಾಡು ಯಾವುದು ಪ್ರತ್ಯೇಕಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಕೇರಳ ಸರ್ಕಾರ ಈ ಸಮಸ್ಯೆಯಿಂದ ಪಾರಾಗಿದೆ. ಕರಾವಳಿ ಭಾಗದ ಎಲ್ಲ ಶಾಸಕರು ಅರಣ್ಯ ಸಚಿವರನ್ನು ಭೇಟಿಯಾಗಿದ್ದು, ಪ್ರತ್ಯೇಕ ಭೂ ಸರ್ವೆ ಮಾಡಲು ಒತ್ತಾಯಿಸಿದ್ದೇವೆ. ರಾಜ್ಯ ಸರ್ಕಾರ ಸರ್ವೆ ಮಾಡುವುದಾಗಿ ಹೇಳಿದ್ದು, ಕಸ್ತೂರಿರಂಗನ್ ವರದಿಯನ್ನು ಒಪ್ಪುವುದಿಲ್ಲ ಎಂದು ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ.
ಶಾಸಕ ಗುರುರಾಜ ಗಂಠಿಹೊಳೆ ಪ್ರತಿಕ್ರಿಯೆ:
ಕಸ್ತೂರಿರಂಗನ್ ವರದಿ ವಿರುದ್ಧ ಜನಾಂದೋಲನ ಎದ್ದಿದೆ. ದಶಕದ ಹಿಂದಿನ ಹೋರಾಟಗಳು ಫಲ ನೀಡಿಲ್ಲ. ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ಮಾಡಿದ್ದು, ಜನ ಜೀವನಕ್ಕೆ ತೊಂದರೆಯಾಗುವಂತೆ ಆಯೋಗದ ವರದಿ ಇದೆ. ಯಾರು ಕೂಡ ಈಗ ಅರಣ್ಯಕ್ಕೆ ಹೋಗಿ ಅಕ್ರಮ ಮಾಡಿದವರಲ್ಲ. ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ವಾಸವಿದ್ದಾರೆ ಎಂದು ಹೇಳಿದ್ದಾರೆ.