ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸರಿಗಮ ವಿಜಿ ಎಂದೇ ಗುರುತಿಸಿಕೊಂಡಿದ್ದ ನಟ ವಿಜಯಕುಮಾರ(76) ಬುಧವಾರ ನಿಧನರಾದರು.
ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಕಳೆದೊಂದು ವಾರದಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಬೆಂಗಳೂರಿನ ಹೆಚ್ಎಎಲ್ ಪ್ರದೇಶದಲ್ಲಿ ಜನಿಸಿರುವ ವಿಜಯಕುಮಾರ, ನಾಟಕದ ಹಿನ್ನಲೆಯಿಂದ ಸಿನಿಮಾರಂಗವನ್ನು ಪ್ರವೇಶಿಸಿದ್ದರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿದ್ದುಕೊಂಡು, ನಟನೆಯನ್ನೂ ಮಾಡುವ ಮೂಲಕ ಮೊದಲಬಾರಿಗೆ ಚಿತ್ರರಂಗಕ್ಕಾಗಿ ಬಣ್ಣಹಚ್ಚಿದ್ದರು. ಇದೇ ಅವಧಿಯಲ್ಲಿ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕವನ್ನು ಅವರು ಬರೆದಿದ್ದು, ಇದು ರವೀಂದ್ರ ಕಲಾಕ್ಷೇತ್ರ ಹಾಗೂ ಪುರಭವನದಲ್ಲಿ ಪ್ರದರ್ಶನ ಕಂಡು, ವಿಜಯಕುಮಾರ್ ಅವರಿಗೆ ಸಾಕಷ್ಟು ಯಶಸ್ಸನ್ನು, ಸರಿಗಮ ವಿಜಿ ಎನ್ನುವ ಹೆಸರನ್ನು ತಂದುಕೊಟ್ಟಿತ್ತು.
ಕನ್ನಡ ಚಿತ್ರರಂಗದ ಮೇರು ನಟರುಗಳಾದ ಶಂಕರನಾಗ್, ಅನಂತನಾಗ್, ಕಲ್ಯಾಣಕುಮಾರ, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಶಿವರಾಜಕುಮಾರ್, ಪುನೀತ್ ರಾಜಕುಮಾರ, ದರ್ಶನ್ ಸೇರಿದಂತೆ ಹಲವಾರು ನಟರೊಂದಿಗೆ ನಟನೆ ಮಾಡಿದ್ದಾರೆ. ಸರಿಗಮ ವಿಜಿ ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲೇ ಮಿಂಚಿದ್ದು ಹಲವು ಧಾರಾವಾಹಿಗಳಲ್ಲೂ ಸಹ ತಮ್ಮ ನಟನೆಯನ್ನು ಪ್ರದರ್ಶನ ಮಾಡಿದ್ದಾರೆ.
ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ನೂರಕ್ಕೂ ಅಧಿಕ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆ ವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಇರುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ವಿಜಯಕುಮಾರ ಸಾವಿಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.