ಕುಮಟಾ: ಯಕ್ಷಗಾನ ಕೇವಲ ಮನರಂಜನೆಗೆ ಮಾಡುವ ಕಲೆಯಲ್ಲ. ಅದು ದೈವಿ ಶಕ್ತಿ ಹೊಂದಿರುವ ಕಲೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯರಾದ ಅಶೋಕ ನಾಯ್ಕ ದೊಡ್ಡಗದ್ದೆ ಅಭಿಪ್ರಾಯಪಟ್ಟರು.
ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಣೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷೋನ್ಮುಖ ಕಲಾಬಳಗದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಕಂಸ ದಿಗ್ವಿಜಯ ಯಕ್ಷಗಾನ ಪ್ರದರ್ಶನ ಹಾಗೂ ಮಕ್ಕಳ ಮನರಂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಹರಕೆ ರೂಪದಲ್ಲಿ ಯಕ್ಷಗಾನ ಆಡಿಸುತ್ತಾರೆ. ಅಂದರೆ ಅದು ದೇವರಿಗೆ ಪ್ರಿಯವಾದ ಸೇವೆಯಾಗಿದೆ. ಈ ಕಲೆಯನ್ನು ಮುಂದಿನ ಪೀಳಿಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಕಲಾವಿದ ಅಣ್ಣಪ್ಪ ಗೌಡರ ಮಾತನಾಡಿ, ಯುವಪೀಳೆಗೆಯಲ್ಲಿ ಯಕ್ಷಗಾನದ ಬಗೆಗಿನ ಉತ್ಸಾಹ ಕಡಿಮೆ ಇದೆ. ಮೊಬೈಲ್ ಮೋಹಕ್ಕಿಂತಲೂ ಇಂತಹ ಐತಿಹಾಸಿಕ ಯಕ್ಷಗಾನವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಪಾಲಕರು ಪರಿಚಯಿಸಬೇಕು ಎಂದರು.
ಸಭಾಕಾರ್ಯಕ್ರಮದ ಬಳಿಕ ಸನ್ಮಾನ ಕಾರ್ಯಕ್ರಮ ನಡೆದು ಶ್ರೀ ಮಾರುತಿ ಕಲಾತಂಡ ಇವರಿಂದ ಮಕ್ಕಳ ಮನರಂಜನೆ ಜಾನಪದ ನೃತ್ಯ ನಡೆಯಿತು. ತಂಡದಲ್ಲಿ ಶ್ರೀ ಮಾರುತಿ ಎಮ್, ತೇಜಾ, ಗೋಪಿನಾಥ, ನಾಗಶ್ರೀ ಇನ್ನೂ ಮುಂತಾದವರು ಭಾಗವಹಿಸಿದ್ದರು. ಬಳಿಕ ದಾಮೋದರ ಕಲಾತಂಡದವರಿಂದ ಕಂಸ ದಿಗ್ವಿಜಯ ಎಂಬ ಪೌರಾಣಿಕ ಯಕ್ಷಗಾನ ಅದ್ದೂರಿಯಾಗಿ ನಡೆಯಿತು.
ಯಕ್ಷೋನ್ಮುಖ ಸಂಸ್ಥೆಯ ಅಧ್ಯಕ್ಷ ಷಣ್ಮುಖ ಗೌಡ ಬಿಳೆಗೋಡ್, ಲಕ್ಷ್ಮಣ ಮರಾಠಿ, ಗೋವಿಂದ ಶಿವು ಎಮ್, ಭಾಗವತರಾದ ಚಿದಾನಂದ ಮರಾಠಿ ಬಂಗಣೆ, ಹಿಮ್ಮೇಳದಲ್ಲಿ ಚಿದಾನಂದ ಬಂಗಣೆ, ಶ್ರೀಧರ ಕಲ್ವೆ, ದೀನೆಶ ಕಲ್ವೆ, ಮುಮ್ಮೆಳದಲ್ಲಿ ದಾಮೋದರ ಗೌಡ ಕಟ್ಟೆಕೈ, ಚಂದ್ರು ಮರಾಠಿ, ಪ್ರದೀಪ ಮುಡ್ನಳ್ಳಿ, ಗೌತಮ್ ಇನ್ನು ಮುಂತಾದವರು ಭಾಗವಹಿಸಿದರು.