ಮೈಸೂರು: ಮೈಸೂರು ತಾಲೂಕಿನ ತಾಳೂರು ಗ್ರಾಮದ ತೋಟದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೋಮವಾರ ಮುಂಜಾನೆ ಚಿರತೆ ಸೆರೆಯಾಗಿದೆ.
ರೈತ ಟಿ. ಎಂ.ರವಿಕುಮಾರ್ ಎಂಬುವವರ ಮನೆಯ ಹೊರಗಡೆ ಜಮೀನಿನಲ್ಲಿ ಚಿರತೆ ಪತ್ತೆಯಾಗಿದೆ. “ಬೆಳಿಗ್ಗೆ 3 ಗಂಟೆಯ ಸುಮಾರಿಗೆ ನನ್ನ ನಾಯಿ ಬೊಗಳುತ್ತಿದುದರಿಂದ ಎಚ್ಚರಗೊಂಡೆ. ಅದರ ಬೊಗಳುವಿಕೆಯಲ್ಲಿ ಒಂದು ಭಯ ಗಮನಕ್ಕೆ ಬಂತು, ಹೀಗಾಗಿ ಏನೋ ಸಮಸ್ಯೆಯಾಗಿದೆ ಎಂದು ಪರೀಕ್ಷಿಸಲು ನಾನು ಎಲ್ಲಾ ನಾಲ್ಕು ಸಿಸಿಟಿವಿ ಕ್ಯಾಮೆರಾಗಳ ವೀಡಿಯೊಗಳನ್ನು ಪ್ಲೇ ಮಾಡಿದಾಗ ಚಿರತೆ ಓಡಾಟ ಕಂಡಿದೆ ಎಂದು ಮಾಲೀಕ ಹೇಳಿದ್ದಾರೆ.
ಆರು ತಿಂಗಳ ಹಿಂದೆ ಚಿರತೆ ತನ್ನ ಮನೆಯ ಕಾಂಪೌಂಡ್ ಒಳಗೆ ಕಟ್ಟಿಹಾಕಿದ್ದ ತನ್ನ ಎರಡು ಹಸುಗಳ ಮೇಲೆ ದಾಳಿ ಮಾಡಿತ್ತು ಎಂದು ರವಿಕುಮಾರ ತಿಳಿಸಿದ್ದಾರೆ. “ಈಗಲೂ, ನನಗೆ ಎರಡು ಹಸುಗಳಿವೆ, ಆದರೆ ಅವು ತೊಂದರೆಗೊಳಗಾಗಲಿಲ್ಲ. ನಾಯಿ ಕೂಡ ಸುರಕ್ಷಿತವಾಗಿದೆ ಏಕೆಂದರೆ ಅದು ಮೋರಿ ಒಳಗೆ ಇತ್ತು. ಆರು ತಿಂಗಳ ಹಿಂದೆ ನಾನು ನನ್ನ ಜಮೀನಿನ ಬಳಿ ಹುಲಿಯನ್ನು ಸಹ ನೋಡಿದ್ದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ‘ ಎಂದರು.
ನಮ್ಮ ತೋಟಕ್ಕೆ ಹೊಂದಿಕೊಂಡು ಇತರೆ ಹಲವು ತೋಟಗಳಿವೆ. ಇತ್ತೀಚೆಗೆ ಮನೆಗಳು ನಿರ್ಮಾಣವಾಗುತ್ತಿವೆ. ಈ ಭಾಗದಲ್ಲಿ ಜನವಸತಿ ಕಡಿಮೆಯಿದ್ದು, ಪೊದೆಗಳು ಮತ್ತು ಮರಗಳ ಕಾಡು ಬೆಳವಣಿಗೆ ಇರುವುದರಿಂದ ವನ್ಯ ಪ್ರಾಣಿಗಳು ಓಡಾಟ ನಡೆಸುತ್ತಿವೆ. ಇಲ್ಲದಿದ್ದರೆ ಹತ್ತಿರದಲ್ಲಿ ಯಾವುದೇ ಕಾಡು ಇಲ್ಲ ಎಂದು ತಿಳಿಸಿದ್ದಾರೆ.