ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ 10 ನೇ ಘಟಿಕೋತ್ಸವ ಕಾರ್ಯಕ್ರಮವು ಕುಲಪತಿ ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರ ನೇತೃತ್ವದಲ್ಲಿ ನಿನ್ನೆ ಅದ್ಧೂರಿಯಾಗಿ ಜರುಗಿತು.
2021–22ನೇ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳೆರಡರಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು ವಿಶೇಷವಾಗಿದ್ದು, ಘಟಿಕೋತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು & ಹೆಚ್ಚಾಗಿ ಮಹಿಳಾ ವಿದ್ಯಾರ್ಥಿನಿಯರು ,ಪದವಿ, ಸ್ನಾತಕೋತ್ತರ ಪದವಿ ಮತ್ತು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಹೌದು, ಸ್ನಾತಕ ಪದವಿಯಲ್ಲಿ 10 ವಿದ್ಯಾರ್ಥಿನಿಯರು ಹಾಗೂ ನಾಲ್ವರು ವಿದ್ಯಾರ್ಥಿಗಳು ಸೇರಿ 14 ವಿದ್ಯಾರ್ಥಿಗಳು 22 ಚಿನ್ನದ ಪದಕಗಳನ್ನು ಪಡೆದರೆ, ಸ್ನಾತಕೋತ್ತರ ಪದವಿಯಲ್ಲಿ 22 ವಿದ್ಯಾರ್ಥಿನಿಯರು ಹಾಗೂ 9 ವಿದ್ಯಾರ್ಥಿಗಳು ಸೇರಿ 31 ಮಂದಿ 59 ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡರು. ಒಟ್ಟು 81 ಸ್ವರ್ಣ ಪದಕಗಳನ್ನು ಪಡೆಡಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ರ್ಯಾಂಕ್ ಪ್ರಮಾಣಪತ್ರ ಹಾಗೂ ಚಿನ್ನದ ಪದಕ, ಫಲಕಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಧನ್ಯತಾ ಭಾವ ಮರೆದರು.
ನಾಲ್ಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರು :
ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಬಿ.ಕಾಂ.ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಎಂ. ಮಾಧುರಿ ಮೊದಲ ರ್ಯಾಂಕ್ ಪಡೆದಿರುವ ಅವರಿಗೆ ಎರಡು ಚಿನ್ನದ ಪದಕಗಳು, ಎಂ.ಎಸ್ಸಿ ಭೌತ ವಿಜ್ಞಾನದಲ್ಲಿ ಪ್ರಥಮ ರ್ಯಾಂಕ್ ಪಡೆದ ಆರ್.ಜ್ಯೋತಿ ಎರಡು ಸ್ವರ್ಣ ಪದಕಗಳು, ಬಿ.ಇಡಿಯಲ್ಲಿ ಪ್ರಥಮ ಸ್ಥಾನ ಪಡೆದ ದೀಪಾ ಎಲ್. ಅವರಿಗೆ ಮೂರು ಚಿನ್ನದ ಪದಕ, ಎಂ.ಬಿ.ಎ.ಯಲ್ಲಿ ಮಾಯಕೊಂಡದ ಬಿ.ಎಂ.ಛಾಯಾ ಅವರಿಗೆ ಎರಡು ಚಿನ್ನದ ಪದಕ ಲಭಿಸಿವೆ.
ಕಬ್ಬು ಕಟಾವು ಮಾಡುವ ಪಾಲಕರು: ಮೂರೂ ಚಿನ್ನದ ಪದಕ ಪಡೆದ ಹರಪನಹಳ್ಳಿ ತಾಲ್ಲೂಕಿನ ದೀಪಾ ಎಲ್
ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ತವಡೂರು ತಾಂಡಾದ ದೀಪಾ ಎಲ್. ಅವರು ಬಿ.ಇಡಿಯಲ್ಲಿ ಮೂರು ಚಿನ್ನದ ಪದಕ ಪಡೆದು ಸಾರ್ಥಕ ಮೆರೆದಿದ್ದಾರೆ. ತಂದೆ ಲಕ್ಷ್ಮಣ ನಾಯ್ಕ್ ಹಾಗೂ ತಾಯಿ ಯಮುನಾಬಾಯಿ ಅವರು ಕಬ್ಬು ಕಟಾವು ಕೆಲಸ ಮಾಡಿ ಮಗಳನ್ನು ಓದಿಸಿದ್ದು, ಒಬ್ಬರ ತಂಗಿ ಹಾಗೂ ಅಣ್ಣ ಇದ್ದಾರೆ.
ಇನ್ನು, ಕಲಾ ವಿಭಾಗದಲ್ಲೇ ಸಾಧನೆ ಮಾಡಿ, ಕಾನೂನು ವ್ಯಾಸಂಗಮಾಡುವ ಆಸೆ ಇತ್ತು. ಆದರೆ ಪಾಲಕರು ಶಿಕ್ಷಕಿಯಾಗಬೇಕು ಎಂದು ಆಸೆಪಟ್ಟರು. ಅದರಂತೆ ಅವರ ಆಸೆಯನ್ನು ಈಡೇರಿಸಲಿದ್ದೇನೆ. ನಾವು ಯಾವುದೇ ವಿಷಯವಾದರೂ ಅದಕ್ಕಾಗಿ ಸಮಯ ಮೀಸಲಿಟ್ಟು ಓದಬೇಕು. ಸವಾಲಾಗಿ ಸ್ವೀಕರಿಸಿದರೆ ಸಾಧನೆ ಮಾಡಬಹುದು’ ಎಂದು ಚಿನ್ನದ ಪದಕ ಪಡೆದ ದೀಪಾ ಅಭಿಪ್ರಾಯಪಟ್ಟರು.