ಬೀದರ್: ಹೋಳಿ ಹಬ್ಬದ ದಿನದಂದು ಬೇಲೂರು-ಗಾಡಿಗೌಡ ಗ್ರಾಮ ಪ್ರದೇಶದಲ್ಲಿ ಹೋಳಿಯಾಡಿ ಕೆರೆಯಲ್ಲಿ ಈಜಲು ತೆರಳಿ ಕಣ್ಮರೆಯಾಗಿದ್ದ 23 ವರ್ಷದ ಯುವಕನ ಶವ 24 ಗಂಟೆಗಳ ಕಾರ್ಯಾಚರಣೆಯ ನಂತರ ಪತ್ತೆಯಾಗಿದೆ.
ಮೃತರನ್ನು ಬೇಲೂರು ಗ್ರಾಮದ ಆಕಾಶ್ ಕಾಂಟೆಪ್ಪ ಗುಂಗೆ (23) ಎಂದು ಗುರುತಿಸಲಾಗಿದೆ. ಅವರು ಶುಕ್ರವಾರ ಮಧ್ಯಾಹ್ನ ತಮ್ಮ ನಾಲ್ವರು ಸ್ನೇಹಿತರೊಂದಿಗೆ ಕೆರೆಗೆ ಹೋಗಿದ್ದರು. ಆದರೆ, ಈತನಿಗೆ ಈಜಲು ಸಾಧ್ಯವಾಗದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೆರೆಯ ದಡದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ತಾಲೂಕು ಆಡಳಿತವು ಸಂಜೆಯವರೆಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದರೂ ಯುವಕ ಪತ್ತೆಯಾಗಿರಲಿಲ್ಲ.
ಶನಿವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು. ಬಸವಕಲ್ಯಾಣ ಮತ್ತು ಬೀದರ್ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಮಹಾರಾಷ್ಟ್ರದ ನಾಂದೇಡ್ನ ಗೋದಾವರಿ ಲೈಫ್ ಸೇವಿಂಗ್ ತಂಡವು ಒಂದು ಗಂಟೆಯ ಹುಡುಕಾಟದ ನಂತರ ಯುವಕನ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು.
ಪೊಲೀಸರು, ಕಂದಾಯ ಇಲಾಖೆ ಮತ್ತು ಜಲಾಶಯಗಳ ಈಜು ತಜ್ಞರ ಬೆಂಬಲದೊಂದಿಗೆ 24 ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿಯಾಯಿತು. ತಹಸಿಲ್ದಾರ್ ಶಿವಾನಂದ ಮೈತ್ರೇ ನೇತೃತ್ವದ ಅಧಿಕಾರಿಗಳ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸಹಾಯಕ ಆಯುಕ್ತರಾದ ಮುಕುಲ್ ಜೈನ್, ಸಿಪಿಐ ಅಲಿಸಾಬ್, ಪಾಸಿ ಶಿವಪ್ಪ ಮೇಟಿ, ಎಎಸ್ಐ ಪಂಡಿತ್, ಅಗ್ನಿಶಾಮಕ ಇಲಾಖೆಯ ಮುಖ್ಯ ಅಧಿಕಾರಿ ಮುಜಾಮಿಲ್ ಪಟೇಲ್, ನೀರಾವರಿ ಇಲಾಖೆ ಜೆಇ ಚಂದ್ರಕಾಂತ್, ಕಂದಾಯ ನಿರೀಕ್ಷಕರು ಶರಣು ಪಾವದಾಸೆಟ್ಟಿ, ಶಂಕರ್, ಪಿಡಿಒ ಬಸವರಾಜ್ ರೋಗಿ ಉಪಸ್ಥಿತರಿದ್ದರು.
ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.




