ಬೆಳಗಾವಿ: ಕೊಳವೊಂದರಲ್ಲಿ ತಾಯಿ, ಮಗ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳದಲ್ಲಿ ನಡೆದಿದೆ. ಕವಿತಾ ಬಸವಂತ ಜುನೇಬೆಳಗಾಂವಕರ್ಸ ಹಾಗೂ ಸಮರ್ಥ ಬಸವಂತ ಜುನೇಬೆಳಗಾಂವಕರ್ ಮೃತ ದುರ್ದೈವಿಗಳಾಗಿದ್ದಾರೆ.
ದೀಪಾವಳಿಯ ಮುನ್ನಾ ದಿನವೇ ತಡರಾತ್ರಿ ತಾಯಿ ಮಗ ಬಂದು ಗಣಪತಿ ಕೊಳದಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳಿಗ್ಗೆ ಸಾರ್ವಜನಿಕರು ಶವಗಳು ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಕ್ಯಾಂಪ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಸದ್ಯ ನಿಖರ ಕಾರಣ ತಿಳಿದು ಬಂದಿಲ್ಲವಾಗಿದ್ದು ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.