ಮುಂಬೈ: ವರ್ಲಿಯ ಆದರ್ಶ್ ನಗರದಲ್ಲಿ ನಡೆದ ಗ್ರೈಂಡರ್ ಯಂತ್ರ ಅಪಘಾತದಲ್ಲಿ 19 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಜಾರ್ಖಂಡ್ನ ಸೂರಜ್ ನಾರಾಯಣ್ ಯಾದವ್(19) ಮೃತ ದುರ್ದೈವಿಯಾಗಿದ್ದಾನೆ.
ಸೂರಜ್ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಚಿನ್ ಕೋಥೇಕರ್ ಒಡೆತನದ ರಸ್ತೆ ಬದಿಯ ಚೈನೀಸ್ ಆಹಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಯಾದವ್ ಅವರ ಶರ್ಟ್ ಗ್ರೈಂಡರ್ ಯಂತ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಯಂತ್ರದ ರಭಸಕ್ಕೆ ಆತ ಒಳಗೆ ಎಳೆದುಕೊಳ್ಳಲ್ಪಟ್ಟಿದ್ದು, ಪರಿಣಾಮ ಸಾವನ್ನಪ್ಪಿದ್ದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಯಾದವ್ ಚೈನೀಸ್ ಅಹಾರದ ಕಚ್ಚಾ ವಸ್ತುಗಳನ್ನು ತಯಾರಿಸಲು ಗ್ರೈಂಡರ್ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಗ್ರೈಂಡರ್ನಂತಹ ಉಪಕರಣಗಳನ್ನು ನಿರ್ವಹಿಸಲು ಆತನಿಗೆ ಯಾವುದೇ ಪೂರ್ವ ಅನುಭವ ಅಥವಾ ತಾಂತ್ರಿಕ ಜ್ಞಾನವಿರಲಿಲ್ಲ.
ಸೂಕ್ತ ಸುರಕ್ಷತಾ ಕ್ರಮಗಳು ಅಥವಾ ತರಬೇತಿಯನ್ನು ಒದಗಿಸದೆ ಕೋಥೇಕರ್ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು ಎಂದು ಆರೋಪಿಸಲಾಗಿದೆ. ಹೀಗಾಗಿ ದಾದರ್ ಪೊಲೀಸರು ಕೋಥೇಕರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.