ಹಾವೇರಿ: ನಗರದಲ್ಲಿ ಆಟವಾಡಲು ಹೋದ ಬಾಲಕನೊಬ್ಬ ಚರಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ಆಲದಮರವೊಂದನ್ನು ಕೊರೆಯಲು ಚರಂಡಿ ಮೇಲೆ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಚರಂಡಿ ಮೇಲೆ ಕಲ್ಲು ಮುಚ್ಚದೆ ನಿರ್ಲಕ್ಷ್ಯ ವಹಿಸಿದ ಆರೋಪ ಮೇಲೆ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಮುಂಜೋಜಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ.
ಘಟನೆ ಹಿನ್ನೆಲೆ:
ಹಾವೇರಿಯಲ್ಲಿ ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ತೆರೆದ ಚರಂಡಿಗೆ ಬಿದ್ದು ನಗರದ ನಿವಾಸಿ ನಿವೇದನ್ ಬಸವರಾಜ ಗುಡಿಗೇರ (12) ಎಂಬ ಬಾಲಕ ಮೃತಪಟ್ಟಿದ್ದ. ಇದಕ್ಕೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಗುರುವಾರ ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಶಿವಾಜಿ ನಗರದ ಬಳಿ ಹಳೇ ಪಿಬಿ ರಸ್ತೆ ಪಕ್ಕದಲ್ಲಿ ಈತ ಆಟ ಆಡುತ್ತಿದ್ದ. ಈ ವೇಳೆ ತೆರೆದ ಕಾಲುವೆ ದಾಟಲು ಮುಂದಾದಾಗ ಕಾಲುಜಾರಿ ಚರಂಡಿಗೆ ಬಿದ್ದಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನನ್ನು ಹುಡುಕಲು ಕಾರ್ಯಾಚರಣೆ ನಡೆಸಿದರಾದರೂ ಚರಂಡಿ ತುಂಬಿ ಹರಿಯುತ್ತಿದ್ದ ಹಿನ್ನೆಲೆ ತಕ್ಷಣ ಬಾಲಕ ಪತ್ತೆಯಾಗಲಿಲ್ಲ. ನಂತರ ಜೆಸಿಬಿಗಳಿಂದ ಚರಂಡಿ ಸ್ಲ್ಯಾಬ್ಗಳನ್ನು ತೆರವುಗೊಳಿಸಿ 2 ಗಂಟೆಯ ಕಾರ್ಯಾಚರಣೆ ಬಳಿಕ ಸುಮಾರು 30 ಮೀಟರ್ ದೂರದಲ್ಲಿ ಚರಂಡಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತಾದರೂ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ.
ನಗರಸಭೆ ವಿರುದ್ಧ ಪ್ರತಿಭಟನೆ:
ಮಗನ ಸಾವಿನ ವಿಚಾರ ತಿಳಿದು ಹೆತ್ತವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಬಾಲಕನ ಸಾವಿಗೆ ಹಾವೇರಿ ನಗರಸಭೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸ್ಥಳೀಯರು 2 ಗಂಟೆಗಳ ಕಾಲ ಹಾವೇರಿಯ ಪಿ.ಬಿ.ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಕನ ಸಾವಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದ್ದರು.