ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಟ್ವಿಸ್ಟ್ ಸಿಕ್ಕಿದ್ದು, ಹಂತಕರು ರಕ್ತದೋಕುಳಿ ಹರಿಸಲು 40 ನಿಮಿಷ ಕಾದಿದ್ದರು ಎಂಬ ಸಂಗತಿ ಬಯಲಾಗಿದೆ.
ಪ್ರವೀಣ್ ಕೊಲೆಗೂ ಮುನ್ನ ಆರೋಪಿಗಳು ಭಯಾನಕ ಸಂಚು ರೂಪಿಸಿದ್ದು, ಪ್ರವೀಣ್ ನೆಟ್ಟಾರು ಚಿಕನ್ ಅಂಗಡಿಯಿಂದ 50 ಕಿ.ಮೀ ದೂರದಲ್ಲಿ 40 ನಿಮಿಷದವರೆಗೆ ಒಂದೇ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು ಎನ್ನಲಾಗಿದೆ. 8.33ಕ್ಕೆ ಅಂಗಡಿ ಬಳಿ ಹೋಗಿರುವ ಹಂತಕರು ವಾಪಸ್ ಬಂದು, ಬಳಿಕ ಮತ್ತೆ 8.40ರ ಸಮಯದಲ್ಲಿ ಹತ್ಯೆ ಮಾಡಿದ್ದಾರೆ.
ಪ್ರವೀಣ್ ಹತ್ಯೆ ಕೇಸ್: 16 ಜನ ವಶಕ್ಕೆ!
ಸುಳ್ಯ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ತನಿಖೆ ನಡಯುತ್ತಿದ್ದು, ಈಗಾಗಲೇ 16 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಮಂಗಳೂರು ಕಮಿಷನರ್ ಸಹಾಯ ಪಡೆದು ಈಗಾಗಲೇ ಆರು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ಅಧಿಕಾರಿಗಳಿಗೆ ಜನರು ಅವಕಾಶ ನೀಡಬೇಕು ಎಂದರು. ಆರೋಪಿಗಳ ಅರೆಸ್ಟ್ ಬಳಿಕವೇ ಹತ್ಯೆಯ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
7 ಮಂದಿ SDPI ಕಾರ್ಯಕರ್ತರು ವಶ:
ಇನ್ನು, 7 ಜನ ಶಂಕಿತ SDPI ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಅಮಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು SDPI ಆರೋಪಿಸಿದೆ. ಈವರೆಗೆ ಕೊಂಚ ಶಾಂತವಾಗಿದ್ದ ಕರಾವಳಿ, ಪ್ರವೀಣ್ ಹತ್ಯೆಯ ಬಳಿಕ ಮತ್ತೆ ಕೆರಳಿ ಕೆಂಡವಾಗಿದೆ.