ತಿರುವನಂತಪುರಂ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಯಿಂದಾಗಿ ಕೇರಳ ತತ್ತರಿಸಿದೆ. ಈ ಹಿನ್ನಲೆ ಪಾದಯಾತ್ರೆ ಮೂಲಕ ಕಾಡಿನ ದಾರಿಯಲ್ಲಿ ಆಗಮಿಸುವ ಶಬರಿಮಲೆ ಭಕ್ತರಿಗೆ ನಿಷೇಧ ಹೇರಲಾಗಿದೆ.
ಕೇರಳದಲ್ಲಿ ಮಳೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದ್ದು ಹೀಗಾಗಿ ಪಾದಯಾತ್ರೆ ಮೂಲಕ ಆಗಮಿಸುವ ಶಬರಿಮಲೆ ಯಾತ್ರಾರ್ಥಿಗಳು ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚಾರಿಸದಂತೆ ಸೂಚಿಸಲಾಗಿದೆ. ಅಲ್ಲದೇ ಈ ಭಾಗದಲ್ಲಿ ಗುಡ್ಡಕುಸಿತದ ಆತಂಕ ಇರುವ ಹಿನ್ನಲೆ ತಾತ್ಕಾಲಿಕವಾಗಿ ಅರಣ್ಯ ಮಾರ್ಗವನ್ನು ಮುಚ್ಚಲಾಗಿದೆ.
ಕಾಲ್ನಡಿಗೆ ಮೂಲಕ ಆಗಮಿಸುವ ಯಾತ್ರಿಕರು ಶಬರಿಮಲೆಗೆ ತೆರಳಲು ನೀಲಕ್ಕಲ್-ಪಂಪಾ ಮಾರ್ಗದ ಮೂಲಕ ತೆರಳುವಂತೆ ಸೂಚಿಸಲಾಗಿದೆ. ಈಗಾಗಲೇ ಪಾದಯಾತ್ರೆ ಮೂಲಕ ಅರಣ್ಯ ಮಾರ್ಗವನ್ನು ಪ್ರವೇಶಿಸಿದ್ದ ಭಕ್ತರನ್ನು ವಿಶೇಷ ಬಸ್ ಮೂಲಕ ಪಂಪಾಗೆ ತಲುಪಿಸಲಾಗಿದೆ.
ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿಮೀ ದೂರವಿದ್ದು, ಈ ಅರಣ್ಯ ಪ್ರದೇಶದಲ್ಲಿ ಭಾನುವಾರ ದಟ್ಟ ಮಂಜು ಕವಿದ ವಾತಾವರಣವಿತ್ತು. ಭಾರೀ ಮಳೆಯ ಕಾರಣ ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭೂಕುಸಿತ ಸಾಧ್ಯತೆ ಇರುವ ಹಿನ್ನಲೆ ಅರಣ್ಯ ಮಾರ್ಗವನ್ನು ಪಾದಯಾತ್ರಿಗಳು ಬಳಕೆ ಮಾಡದಂತೆ ನಿಷೇಧ ಹೇರಲಾಗಿದೆ.