ದಾವಣಗೆರೆ: ಸಣ್ಣ ಗಾಯವಾದರೆ ರಕ್ತದ ಕೋಡಿಯೇ ಹರಿಯುತ್ತದೆ, ಅಂಥದ್ದರಲ್ಲಿ ಕಬ್ಬಿಣದ ತ್ರಿಶೂಲವನ್ನೇ ಅಂದರೆ ಶಸ್ತ್ರವನ್ನೇ ಕಾಲಿಗೆ ತೂರಿದರೂ ಒಂದು ಹನಿ ರಕ್ತವಿಲ್ಲ, ಇದು ಮಲೇಬೆನ್ನೂರು ಸಮೀಪದ ದೇವರಬೆಳಕೆರೆ ಮೈಲಾರಲಿಂಗೇಶ್ವರ ರಥೋತ್ಸವದಲ್ಲಿ ಗುರುವಾರ ನಡೆದ ‘ಕಾಲಶಸ್ತ್ರ’ ಪವಾಡ.
ಗೊರವಪ್ಪ ಕಾಲಿಗೆ ತ್ರಿಶೂಲವನ್ನು ಚುಚ್ಚಿಸಿಕೊಂಡು ಇನ್ನೊಂದು ಬದಿಯಿಂದ ಅದು ಹೊರ ಬರುತ್ತಿದ್ದಂತೆ ಭಕ್ತರು ಭಾವಪರವಶವಾದರು. ಮೈಲಾರಲಿಂಗೇಶ್ವರನ ಮಹಿಮೆಯನ್ನು ಕೊಂಡಾಡಿದರು. ವೈಚಾರಿಕ ಚಿಂತಕರಿಗೆ ಸೋಜಿಗವನ್ನುಂಟು ಮಾಡಿತು. ಇದರ ಹಿಂದೆ ಇರುವ ವಿಜ್ಞಾನ ಏನು ಎಂದು ತಲೆಕೆರೆದುಕೊಂಡರು.
ಬಳಿಕ ಕೈಗೆ ಮುಳ್ಳುದೀಪ ಚುಚ್ಚಿಕೊಂಡು ಆರತಿ ಮಾಡಿದಾಗಲೂ ಒಂದು ಹನಿ ರಕ್ತ ಬರಲಿಲ್ಲ. ಕಂಬಕ್ಕೆ ಭದ್ರವಾಗಿ ಬಿಗಿಯಲಾಗಿದ್ದ ಸರಪಳಿ ಎಳೆದು ತುಂಡು ಮಾಡುವ ಪ್ರದರ್ಶನ ಸಹಿತ ಜಾತ್ರೆಯಲ್ಲಿ ನಡೆದ ಪವಾಡಗಳಿಗೆ ಜನಮನಸೋತರು.
ಜಾತ್ರೆಯಲ್ಲಿ ಸುತ್ತ ಜಮಾಯಿಸಿದ್ದ ಸಾವಿರಾರು ಭಕ್ತರು ಏಳು ಕೋಟಿ, ಏಳು ಕೋಟಿ… ಏಳು ಕೋಟಿಗೋ… ಚಾಂಗಮಲೋ ಎಂದು ಉದ್ಘೋಷ ಕೂಗಿದರು. ದೀವಟಿಗೆ, ಚಾಮರ, ಚಾವಟಿ ಸೇವೆ, ಬಾಯಿಗೆ ಬೀಗಹಾಕಿಕೊಂಡವರು ಹರಕೆ ಸಮರ್ಪಣೆ ಮಾಡಿದರು.
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಜಾತ್ರೆ ಮುಕ್ತಾಯವಾದ 3 ದಿನದ ನಂತರ ಇಲ್ಲಿ ಜಾತ್ರೆ ನಡೆಯುವುದು ಪುರಾತನ ಕಾಲದಿಂದ ನಡೆದು ಬಂದಿದೆ ಎಂದು ಭಕ್ತರು ತಿಳಿಸಿದರು.
ಇದನ್ನು ಓದಿ: ಹೂವಿನಹಡಗಲಿ ಮೈಲಾರಲಿಂಗೇಶ್ವರ ವರ್ಷದ ಭವಿಷ್ಯವಾಣಿ: ‘ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್’
ಇದನ್ನು ಓದಿ: ಹರಪನಹಳ್ಳಿ ಮೈಲಾರಲಿಂಗೇಶ್ವರ ಕಾರ್ಣಿಕ: “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್”