ಕಾರವಾರ: ಸ್ವ ಇಚ್ಚೆಯಿಂದ ಗ್ಯಾರಂಟಿ ಬಿಟ್ಟು ಕೊಡುವವರು ಬೇಕಾದರೆ ಬಿಟ್ಟುಕೊಡಲಿ, ಆದರೆ ಯಾವ ಗ್ಯಾರೆಂಟಿ ಯೋಜನೆಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಮೀನುಗಾರಿಕೆ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ. ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಅವರು ಮಾತನಾಡಿದರು.
ಶಕ್ತಿ ಯೋಜನೆಯ ಪರಿಷ್ಕರಣೆ ಮಾಡುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ ನೀಡಿರುವ ಹೇಳಿಕೆ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಮಂಕಾಳು ವೈದ್ಯ ಅವರು ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು. ಗ್ಯಾರಂಟಿ ಯೋಜನೆಗಳು ಸರ್ಕಾರದ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕನಸ್ಸಿನ ಯೋಜನೆಗಳಾಗಿವೆ. ಯಾವ ಗ್ಯಾರಂಟಿಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರಿಗೆ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ ಎಂದರು.
ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತವೆ. ಆದರೆ ಸರ್ಕಾರದ ಬಳಿ ಗ್ಯಾರಂಟಿ ಯೋಜನೆಗಳಿಗೆ ಹಣದ ಸಮಸ್ಯೆ ಇಲ್ಲ. ಗ್ಯಾರಂಟಿಗಳ ಜಾರಿಗೆ ಬಜೆಟ್ ನಲ್ಲಿ ಶೇಕಡಾ 20% ರಷ್ಟು ಹಣ ಮಾತ್ರ ತಗಲುತ್ತದೆ. ಆದರೆ ಉಳ್ಳವರು ಗ್ಯಾರಂಟಿ ಬಿಟ್ಟು ಕೊಡಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದ ಸಚಿವರು, ಸರ್ಕಾರಿ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಗ್ಯಾರಂಟಿ ಪಡೆಯುತ್ತಿದ್ದಾರೆ. ಅಂತಹವರು ಬೇಕಾದರೆ ಸ್ವ ಇಚ್ಚೆಯಿಂದ ಗ್ಯಾರಂಟಿ ಬಿಟ್ಟು ಕೊಡಲಿ ಎಂದರು.
ಮುಂಬರುವ ದಿನಗಳಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲೂ ಜಾರಿಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಆರ್ಥಿಕ ಸಮಸ್ಯೆಯೇ ಇಲ್ಲ. ಆದರೆ ಬೇರೆ ರಾಜ್ಯದಲ್ಲಿ ಹಣದ ಸಮಸ್ಯೆ ಇದ್ದರೆ ಗ್ಯಾರಂಟಿ ಜಾರಿ ಮಾಡುವುದನ್ನು ಗಮನಿಸಿ ಮಾಡಲಿ ಎಂದು ಮೀನುಗಾರಿಕೆ ಸಚಿವ ಮಂಕಾಳು ವೈದ್ಯ ಹೇಳಿಕೆ ನೀಡಿದ್ದಾರೆ.