ಬೆಂಗಳೂರು: ಈ ವರ್ಷದ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಮಂಗಳೂರಿನಲ್ಲಿ ಕರ್ನಾಟಕದ ಮೊದಲ ‘ವಾಟರ್ ಮೆಟ್ರೋ’ ಯೋಜನೆಯನ್ನು ಪ್ರಾರಂಭಿಸಲು ಘೋಷಿಸಲಾಗಿದೆ.
ವಾಟರ್ ಮೆಟ್ರೋ ಜೊತೆಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಯೋಜನೆಯನ್ನು ಸಹ ಘೋಷಿಸಲಾಗಿದೆ.
ಸಮುದ್ರ ಮತ್ತು ರಾಷ್ಟ್ರೀಯ ಜಲಮಾರ್ಗಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಂಚಾರವನ್ನು ಉತ್ತೇಜಿಸಲು ಕರಾವಳಿ ಬರ್ತ್ ಯೋಜನೆಯನ್ನು ಘೋಷಿಸಲಾಗಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿಯಲ್ಲಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಘಟಕ ಮತ್ತು ರಿವರ್ ಕ್ರೂಸ್ ಪ್ರವಾಸೋದ್ಯಮಕ್ಕೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗುವುದು.
ಹೀಗಾಗಿ, ಕರ್ನಾಟಕದಲ್ಲಿ ಜಲ ಸಾರಿಗೆ ಕ್ಷೇತ್ರದಲ್ಲಿ ಬೃಹತ್ ಅಭಿವೃದ್ಧಿಯ ಸಾಧ್ಯತೆ ಇದೆ. ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಕರ್ನಾಟಕ ಜಲ ಸಾರಿಗೆ ನೀತಿಯನ್ನು ಈಗಾಗಲೇ ಅನುಮೋದಿಸಲಾಗಿದೆ. ಕರಾವಳಿಗೆ ವ್ಯವಸ್ಥಿತ ಮೂಲಸೌಕರ್ಯಗಳನ್ನು ತರಲು ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ವಾಟರ್ ಮೆಟ್ರೋ ಎಂದರೇನು?
ವಾಟರ್ ಮೆಟ್ರೋ ಯೋಜನೆಯು ಸಮುದ್ರಗಳ ನಡುವಿನ ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ವಿದ್ಯುತ್-ಹೈಬ್ರಿಡ್ ದೋಣಿಗಳ ಬಳಕೆಯಾಗಿದೆ. ಇದನ್ನು ಸರ್ಕಾರವೇ ನಿರ್ವಹಿಸುತ್ತದೆ.