ಬೆಳಗಾವಿ: ನಗರ ಕೇಂದ್ರ ಬಸ್ ನಿಲ್ದಾಣದ ಡಿಪೋ 1ರಲ್ಲಿ ಶುಕ್ರವಾರ ಮಧ್ಯರಾತ್ರಿ ಸಾರಿಗೆ ಕಂಪನಿ ಮೆಕ್ಯಾನಿಕಲ್ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
K.T.ಕಮಡೊಳ್ಳಿ(58) ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿಯಾಗಿದ್ದಾರೆ. ಅಧಿಕಾರಿಗಳ ಕಿರುಕುಳದಿಂದಲೇ ಕಮಡೊಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತನ್ನ ಡ್ಯೂಟಿ ಬದಲಾಯಿಸುವಂತೆ ಆತ ಕೇಳಿಕೊಂಡರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ.
ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದ ಸಾರಿಗೆ ಬಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ ವಾಷಿಂಗ್ ಕೆಲಸ ಮಾಡುತ್ತಿದ್ದ ಕೇಶವ ಕಮಡೊಳ್ಳಿಗೆ ಪಂಕ್ಚರ್ ತೆಗೆಯುವ ಕೆಲಸವನ್ನು ನೀಡಲಾಯಿತು. ಬೆನ್ನು ನೋವಿನ ಹೊರತಾಗಿಯೂ, ಪಂಕ್ಚರ್ ಅನ್ನು ಹಾಕುವ ಕೆಲಸಕ್ಕೆ ನೇಮಿಸಲಾಗಿತ್ತು. ಬೆನ್ನು ನೋವಿದ್ದ ಸಂಬಂಧ ಹಲವು ಬಾರಿ ಡ್ಯೂಟಿ ಬದಲಿಸಲು ಮನವಿ ಮಾಡಿದ್ದ ಎನ್ನಲಾಗಿದ್ದು, ಅಧಿಕಾರಿಗಳು ಸ್ಪಂದಿಸದ ಕಾರಣ ಆತ ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.