ಹೈದರಾಬಾದ್: ಮಗ ಸಾವನ್ನಪ್ಪಿದ್ದು ತಿಳಿಯದ ಕಣ್ಣು ಕಾಣದ ದಂಪತಿ, ಊಟವಿಲ್ಲದೇ ಶವದೊಂದಿಗೇ ನಾಲ್ಕು ದಿನ ಕಳೆದ ಧಾರುಣ ಘಟನೆ ನಾಗೋಲ್ನಲ್ಲಿ ನಡೆದಿದೆ. ಪ್ರಮೋದ್.ಕೆ(30) ಸಾವನ್ನಪ್ಪಿದ ಮಗನಾಗಿದ್ದು, ಕೆ.ರಮಣ(60) ಮತ್ತು ಕೆ.ಶಾಂತಾಕುಮಾರಿ(65) ಕಣ್ಣು ಕಾಣ ದಂಪತಿಯಾಗಿದ್ದಾರೆ.
ದಂಪತಿ ಮನೆಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮನೆಯೊಳಗೆ ಪ್ರವೇಶಿಸಿ ಗಮನಿಸಿದಾಗ ದಂಪತಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ಬಾಯಿಯಿಂದ ನೊರೆ ಬರುತ್ತಿದ್ದ ಹಿನ್ನಲೆ ಕೂಡಲೇ ಅಂಬ್ಯುಲೆನ್ಸ್ ಮೂಲಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ದಿನದ ಹಿಂದೆ ಕಿರಿಯ ಮಗ ಪ್ರಮೋದ್ ದಂಪತಿಗೆ ಊಟ ಕೊಟ್ಟು ಮಲಗಿದ್ದು, ನಿದ್ರಾವಸ್ಥೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಮೃತಪಟ್ಟು ನಾಲ್ಕು ದಿನಗಳು ಕಳೆದಿದ್ದ ಹಿನ್ನಲೆ ಶವ ಕೊಳೆತ ಸ್ಥಿತಿಯಲ್ಲಿದ್ದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ನಾಲ್ಕು ದಿನಗಳಿಂದ ಊಟ, ನೀರು ಇಲ್ಲದೇ ದಂಪತಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗಿದೆ.
ಕೆ.ರಮಣ ದಂಪತಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ಗಿರಿಜನ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಸದ್ಯ ಮೃತಪಟ್ಟ ಕಿರಿಯ ಮಗನಿಗೆ ಕುಡಿತದ ಚಟ ಇತ್ತು ಎನ್ನಲಾಗಿದ್ದು ಇದರಿಂದ ಪತ್ನಿಯೂ ಆತನನ್ನು ತೊರೆದಿದ್ದಳು. ಅಲ್ಲದೇ ಮೃತ ಪ್ರಮೋದ್ ಫಿಟ್ಸ್ ಖಾಯಿಲೆಯಿಂದ ಸಹ ಬಳಲುತ್ತಿದ್ದು, ತಂದೆ ತಾಯಿಗೆ ಆತನೇ ಊಟ ಕೊಡುತ್ತಿದ್ದ. ಹೀಗಾಗಿ ಮಲಗಿದ್ದಲ್ಲಿಯೇ ಫಿಟ್ಸ್ ಬಂದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಸದ್ಯ ಕಣ್ಣು ಕಾಣದ ವೃದ್ಧ ದಂಪತಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿರಿಯ ಮಗನ ಸುಪರ್ದಿಗೆ ನೀಡಲಾಗಿದೆ.