Anna Suvidha Yojana | ಕರ್ನಾಟಕ ಸರ್ಕಾರ ಹಿರಿಯ ನಾಗರಿಕರ ಬದುಕು ಸುಲಭಗೊಳಿಸುವ ಉದ್ದೇಶದಿಂದ ‘ಅನ್ನ ಸುವಿಧಾ ಯೋಜನೆ’ಯನ್ನು ಇ೦ದು ಅಧಿಕೃತವಾಗಿ ಜಾರಿಗೆ ತಂದಿದೆ. ಈ ಯೋಜನೆಯಡಿ 75 ವರ್ಷಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ, ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮನೆ ಬಾಗಿಲಿಗೇ ಪಡಿತರ ಧಾನ್ಯಗಳನ್ನು ತಲುಪಿಸಲಾಗುವುದು. ದೈಹಿಕ ಅಸಮನ್ವಯತೆ, ಆರೋಗ್ಯ ಸಮಸ್ಯೆ ಅಥವಾ ಓಡಾಡಲು ಆಗದ ಕಾರಣಗಳಿಂದ ಪಡಿತರ ತರಲು ತೊಂದರೆ ಅನುಭವಿಸುವ ಹಿರಿಯ ನಾಗರಿಕರ ಜೀವನದಲ್ಲಿ ಈ ಯೋಜನೆ ಆಶಾಕಿರಣವಾಗಿ ಪರಿಣಮಿಸಿದೆ.
ಯೋಜನೆಯ ಉದ್ದೇಶ & ಮಹತ್ವ
‘ಅನ್ನ ಸುವಿಧಾ ಯೋಜನೆ’ಯ ಪ್ರಮುಖ ಉದ್ದೇಶ-ವಯೋವೃದ್ಧರಿಗೆ ಆಹಾರ ಭದ್ರತೆ ಒದಗಿಸುವುದಷ್ಟೇ ಅಲ್ಲ, ಅವರಿಗೆ ಸ್ವಾವಲ೦ಬನೆಯ ಭಾವನೆಯನ್ನು ನೀಡುವುದೂ ಆಗಿದೆ. ಸರ್ಕಾರದ ಸಾಮಾಜಿಕ ಬದ್ಧತೆಯ ಭಾಗವಾಗಿ ರೂಪಿತವಾದ ಈ ಯೋಜನೆ, ಗ್ರಾಮ ಮತ್ತು ನಗರ ಪ್ರದೇಶಗಳ ಹಿರಿಯ ನಾಗರಿಕರಿಗೆ ಸಮಾನವಾಗಿ ಪ್ರಯೋಜನಕಾರಿಯಾಗಲಿದೆ. ಮನೆ ಬಾಗಿಲಿಗೇ ರೇಷನ್ ಸಿಗುವ ಮೂಲಕ ಅವರು ಸಾರ್ವಜನಿಕ ಸ್ಥಳಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಕಷ್ಟದಿಂದ ಮುಕ್ತಿ ಪಡೆಯಲಿದ್ದಾರೆ.
ನೋಂದಣಿ ವಿಧಾನ & ಪ್ರಕ್ರಿಯೆ
ಅನ್ನ ಸುವಿಧಾ ಮಾಡ್ಯೂಲ್ ಮೂಲಕ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳ 30 ಅಥವಾ 31 ರಂದು SMS ಕಳುಹಿಸಲಾಗುತ್ತದೆ. ಆ ಸಂದೇಶದಲ್ಲಿ ಮುಂದಿನ ತಿಂಗಳ ಪಡಿತರ ವಿತರಣೆಗಾಗಿ ನೋಂದಾಯಿಸಿಕೊಳ್ಳುವ ಮಾಹಿತಿ ಇರುತ್ತದೆ. ಫಲಾನುಭವಿಗಳು ದಿನಾಂಕ 1 ರಿಂದ 5ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಮನೆ ಬಾಗಿಲಿಗೆ ವಿತರಣೆಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ಸರಳವಾಗಿದ್ದು, ಹಿರಿಯರು ಅಥವಾ ಅವರ ಕುಟುಂಬದವರು ಸುಲಭವಾಗಿ ಪಾಲಿಸಬಹುದಾಗಿದೆ.
ಮನೆ ಬಾಗಿಲಿಗೆ ಪಡಿತರ: 6 ರಿಂದ 15 ರೊಳಗೆ ವಿತರಣೆ
ನೋಂದಾಯಿತ ಫಲಾನುಭವಿಗಳಿಗೆ ಪ್ರತಿ ತಿಂಗಳ 6 ರಿಂದ 15 ರೊಳಗೆ ಪಡಿತರವನ್ನು ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ. ಇದರ ಜವಾಬ್ದಾರಿ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಿಗೆ ನೀಡಲಾಗಿದೆ. ಜಿಲ್ಲೆಯ ಅಧಿಕಾರಿಗಳು ವಿತರಣೆ ಕ್ರಮವನ್ನು ನಿಗದಿತ ಸಮಯದಲ್ಲಿ, ಪಾರದರ್ಶಕವಾಗಿ ನಡೆಸುವ ಸೂಚನೆ ನೀಡಿದ್ದಾರೆ. ಹಾಸನ ಜಿಲ್ಲಾಧಿಕಾರಿಗಳು ಈ ಯೋಜನೆ ‘ಹಿರಿಯ ನಾಗರಿಕರ ಕಲ್ಯಾಣದತ್ತ ಸರ್ಕಾರದ ಮಹತ್ವದ ಹೆಜ್ಜೆ’ ಎ೦ದು ಹೇಳಿದ್ದಾರೆ.
ನಿಯಮ ಪಾಲನೆ ಅಗತ್ಯ
ಯೋಜನೆಯ ಅಡಿಯಲ್ಲಿ ಅನರ್ಹ ವ್ಯಕ್ತಿಗಳು ಪ್ರಯೋಜನ ಪಡೆಯುವ ಪ್ರಯತ್ನ ಮಾಡಿದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಪಡೆದ ಸಬ್ಸಿಡಿ ಧಾನ್ಯಗಳ ಬೆಲೆಯನ್ನು ಮರುಪಾವತಿಸಲು ಆದೇಶಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಎಲ್ಲಾ ಪಡಿತರ ಚೀಟಿದಾರರು ತಮ್ಮ ಅರ್ಹತೆಯನ್ನು ಪರಿಶೀಲಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ಕಾರ ಮನವಿ ಮಾಡಿದೆ. ‘ಅನ್ನ ಸುವಿಧಾ’ ಯೋಜನೆ ಯಶಸ್ವಿಯಾದರೆ, ಅದು ರಾಜ್ಯದ ಹಿರಿಯ ನಾಗರಿಕರ ಗೌರವಯುತ ಬದುಕಿಗೆ ನಿಜವಾದ ಬೆಂಬಲವಾಗಲಿದೆ.




