ಮಧ್ಯಪ್ರದೇಶ: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಭಾರೀ ವಾಹನಗಳ ನಡುವೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಬೇತುಲ್-ಪಾರಾಸಿಯಾ ರಸ್ತೆಯ ಹನುಮಾನ್ ಡೋಲ್ ಬಳಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರೆ, 12 ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ಪಿ) ಕಮಲಾ ಜೋಶಿ ತಿಳಿಸಿದ್ದಾರೆ. ಮೃತರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಬೇತುಲ್ ರೈಲು ನಿಲ್ದಾಣದಿಂದ ತಮ್ಮ ಗ್ರಾಮದ ಮನೆಗೆ ಹಿಂದಿರುಗುತ್ತಿದ್ದ ಕಾರ್ಮಿಕರಾಗಿದ್ದರು.
ಚಲಿಸುತ್ತಿದ್ದ ವೇಳೆ ಟ್ರಾಲಿ ಮಗುಚಿದ್ದು, ಟ್ರ್ಯಾಕ್ಟರ್ನಲ್ಲಿದ್ದ 21 ಮಂದಿ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರು ತಮಿಳುನಾಡಿನ ಕನ್ಯಾಕುಮಾರಿಯಿಂದ ಬೇತುಲ್ಗೆ ಕೆಲಸಕ್ಕೆಂದು ಆಗಮಿಸಿದ್ದರು. ಅಲ್ಲಿ ಅವರು ಒಂದು ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಜಿಲ್ಲಾಧಿಕಾರಿ ನರೇಂದ್ರ ರಘುವಂಶಿ ತಿಳಿಸಿದ್ದಾರೆ. ಟ್ರ್ಯಾಕ್ಟರ್ನಲ್ಲಿದ್ದ ಎಲ್ಲರೂ ಘೋರಡೋಂಗ್ರಿ ತಹಸಿಲ್ನ ಬಕುಡ್ ಮತ್ತು ದುಲಾರಾ ಗ್ರಾಮಗಳ ನಿವಾಸಿಗಳಾಗಿದ್ದು, ಹಬ್ಬದ ಹಿನ್ನಲೆ ಕನ್ಯಾಕುಮಾರಿಯಿಂದ ವಾಪಸ್ಸಾಗಿದ್ದರು. ತೀವ್ರವಾಗಿ ಗಾಯಗೊಂಡ ಮೂವರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್ಗೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ, ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಬೆತುಲ್-ಅಥ್ನರ್ ರಸ್ತೆಯಲ್ಲಿ ಟ್ರಕ್ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಭಾರಕವಾಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಬೇತುಲ್ ಬಜಾರ್ ಪೊಲೀಸ್ ಠಾಣೆಯ ಪ್ರಭಾರಿ ಅಂಜನಾ ಧುರ್ವೆ ತಿಳಿಸಿದ್ದಾರೆ.
ರಸಗೊಬ್ಬರವನ್ನು ಸಾಗಿಸುತ್ತಿದ್ದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ತಲುಪುವ ವೇಳೆಗಾಗಲೇ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮೃತರನ್ನು ವಿಜಯ್ (35), ಕೃಷ್ಣ ಧುರ್ವೆ (20) ಮತ್ತು ರಘುನಾಥ್ ಸರಿಯಂ (38) ಎಂದು ಗುರುತಿಸಲಾಗಿದೆ. ವಾಹನವನ್ನು ಬಿಟ್ಟು ಪರಾರಿಯಾಗಿರುವ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.