ಬೆಂಗಳೂರು: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿದ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ಡ್ರೋಣ್ ಪ್ರತಾಪ್ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.
ಪಶು ವೈದ್ಯರಾಗಿರುವ ಪ್ರಯಾಗ್ ಅವರು, ಪ್ರತಾಪ್ ವಿರುದ್ಧ ಎಡಿಜಿಪಿ ಹಿತೇಂದ್ರ ಕುಮಾರ್ ಗೆ ದೂರು ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಬೇರೆಯವರಿಗೆ ಡ್ರೋಣ್ ಹಾರಿಸಲು ಪ್ರತಾಪ್ ಪ್ರಚೋದನೆ ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಡ್ರೋಣ್ ಹಾರಿಸಿ ಅದರ ಸಂಶೋಧನೆ ಮಾಡಿದ್ದೇನೆಂದು ಸುಳ್ಳು ಹೇಳುತ್ತಿದ್ದಾರೆ. ಕೃಷಿ ಮಾಡುವ ರೈತರಿಗೆ ಡ್ರೋಣ್ ಹೆಸರಲ್ಲಿ ಔಷಧಿ ಸಿಂಪಡಿಕೆ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಡಿಯಂ ರಸಾಯನಿಕ ವಿಚಾರದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. 9 ದಿನ ಜೈಲುವಾಸ ಅನುಭವಿಸಿದ್ದ ಪ್ರತಾಪ್ಗೆ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ. ಪ್ರತಾಪ್ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಪ್ರಯಾಗ್ ದೂರು ನೀಡಿದ್ದಾರೆ.