ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್ಗೆ ಕೊನೆಗೂ ಜಾಮೀನು ಸಿಕ್ಕಿದೆ. ಬರೋಬ್ಬರಿ 131 ದಿನಗಳ ಬಳಿಕ ‘ಗಜ’ನಿಗೆ ರಿಲೀಸ್ ಭಾಗ್ಯ ಲಭಿಸಿದೆ.
ಚಿಕಿತ್ಸೆ ಅಗತ್ಯತೆಯ ಆಧಾರದಲ್ಲಿ ದರ್ಶನ್ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ವಾದ ಮಂಡಿಸಿದ್ದು, ಅನಾರೋಗ್ಯ ಸಂಬಂಧಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಚಿಕಿತ್ಸೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು.
ಅದರಂತೆ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆಯ ಅಗತ್ಯತೆಯನ್ನು ಪರಿಗಣಿಸಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮದ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ಷರತ್ತಿನಲ್ಲಿ ಪಾಸ್ಪೋರ್ಟ್ ಸರೆಂಡರ್ ಮಾಡಬೇಕು, ಚಿಕಿತ್ಸೆಯ ಕುರಿತು ಪ್ರತಿವಾರ ಮಾಹಿತಿಯನ್ನು ಪೂರೈಸಬೇಕು ಸೇರಿದಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಮದ್ಯಂತರ ಜಾಮೀನು ಮಂಜೂರು ಮಾಡಿದೆ.
ಹೀಗಾಗಿ ಷರತ್ತುಗಳನ್ನು ಪೂರೈಸಿ ಇಂದೇ ಜಾಮೀನಿನ ಮೇಲೆ ದರ್ಶನ್ ಹೊರಬರುವ ನಿರೀಕ್ಷೆಯಿದೆ. ನ್ಯಾಯಾಲಯದಿಂದ ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲನೆ ಮಾಡಲಾಗುವುದು ಎಂದು ದರ್ಶನ್ ಪರ ವಕೀಲ ನಾಗೇಶ ತಿಳಿಸಿದ್ದಾರೆ.