ಕೊಟ್ಟೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರು ರಾಜೀನಾಮೆ ನೀಡುವುದನ್ನು ಯಾವುದೇ ಶಕ್ತಿ ತಡೆಯಲಾರದು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಪೆರೋಲ್ ಮೇಲೆ ಹೊರಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶುಕ್ರವಾರ ಉಜ್ಜಯನಿ ಸದ್ಧರ್ಮ ಪೀಠಕ್ಕೆ ಆಗಮಿಸಿ ಜಗದ್ಗುರುಗಳಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಇದರ ಸತ್ಯಾಸತ್ಯತೆ ಸಿದ್ದರಾಮಯ್ಯ ಅವರ ನಿಜವಾದ ಮುಖವಾಡ ಬಯಲಿಗೆ ತರಲಿದೆ. ಈ ಬಗ್ಗೆ ಜನ ಗಮನಹರಿಸದಿರುವಂತೆ ಮಾಡುವ ಪ್ರಯತ್ನವನ್ನು ಉಪ ಚುನಾವಣೆಯ ಪ್ರಚಾರದ ವೇಳೆ ಮಾಡತೊಡಗಿದ್ದಾರೆ ಎಂದು ಹೇಳಿದರು.
ರಾಜ್ಯದ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದೇನೆ. ಮೂರು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರಂತರ ತೊಡಗಿಸಿಕೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರೊಂದಿಗೆ ಕೂಡಿ ಮೂರೂ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡುತ್ತೇವೆ ಎಂದರು.
ಚನ್ನಪಟ್ಟಣದಲ್ಲಿ ರಾಜಕೀಯ ಮೇಲಾಟ ನಡೆದಿದೆ. ಕೊನೆಯದಾಗಿ ಮೈತ್ರಿ ಅಭ್ಯರ್ಥಿ ಗೆಲುವಿನ ದಡ ತಲುಪಲಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಯೋಗೇಶ್ವರ್ ಅವರನ್ನು ಹರಕೆಯ ಕುರಿ ಮಾಡಲು ಮುಂದಾಗಿದ್ದಾರೆ. ಬಿಜೆಪಿಯವರು ನಿಖಿಲ್ ಕುಮಾರಸ್ವಾಮಿ ವಿಚಾರದಲ್ಲಿ ಆ ರೀತಿ ಮಾಡುವುದಿಲ್ಲ. ಇದನ್ನು ಕಾಂಗ್ರೆಸ್ಸಿಗರು ನೆನಪಿಟ್ಟುಕೊಳ್ಳಲಿ ಎಂದರು.
ಬಿಜೆಪಿಯಲ್ಲಿ ಯಾವುದೇ ಭಿನ್ನಮತದ ಪ್ರಶ್ನೆಯೇ ಇಲ್ಲ. ತಾವು ಅಧ್ಯಕ್ಷರಾದ ಘಳಿಗೆಯಿಂದ ವಿರೋಧಿಸುತ್ತ ಬಂದಿರುವವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿ ಪಕ್ಷ ಸಂಘಟಿಸುವ ಕಾರ್ಯ ಮಾಡುತ್ತಿರುವೆ. ಪಕ್ಷವನ್ನು ರಾಜ್ಯದಲ್ಲಿ ಸದೃಢವಾಗಿ ಸಂಘಟಿಸಿದ ಯಡಿಯೂರಪ್ಪ ಅವರನ್ನೇ ವಿರೋಧಿಸುತ್ತಾ ಬಂದಿರುವವರಿಗೆ ವಿಜಯೇಂದ್ರ ಯಾವ ಲೆಕ್ಕ? ಆದರೂ ಅವರು ಮಾಡುವ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ರಾಜ್ಯದಲ್ಲಿ ಮುಂದೆ ಬಿಜೆಪಿ ಅಧಿಕಾರ ಹೊಂದಲು ಎಲ್ಲರೊಂದಿಗೆ ಕೈ ಜೋಡಿಸುತ್ತಿರುವೆ ಎಂದರು.