ಕಾನ್ಪುರ: ದೀಪಾವಳಿಗೆಂದು ಹಚ್ಚಿದ್ದ ದೀಪದಿಂದ ಮನೆಗೆ ಬೆಂಕಿ ಹೊತ್ತಿ ಹೊಗೆ ಆವರಿಸಿಕೊಂಡು ಉದ್ಯಮಿ ದಂಪತಿ ಮತ್ತು ಮನೆಕೆಲಸದಾಕೆ ಉಸಿರುಗಟ್ಟಿ ಮೃತಪಟ್ಟ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸಂಜಯ್ ಶ್ಯಾಂ ದಾಸನಿ (49) ಮತ್ತು ಅವರ ಪತ್ನಿ ಕನ್ನಿಕಾ ಮತ್ತು ಕೆಲಸದಾಕೆ ಚವ್ವಿ ಚೌಹಾಣ್ ತಡರಾತ್ರಿ ವರೆಗೆ ದೀಪಾವಳಿ ಆಚರಿಸಿ, ದೇವರ ಮನೆಯಲ್ಲಿ ದೀಪ ಹಚ್ಚಿದ್ದರು. ದೇವರ ಮನೆಯನ್ನು ಕಟ್ಟಿಗೆಯಿಂದ ನಿರ್ಮಿಸಲಾಗಿತ್ತು.
ಬಳಿಕ ಮೊದಲನೇ ಮಹಡಿಯಲ್ಲಿನ ಕೋಣೆಯಲ್ಲಿ ಮಲಗಿದ್ದರು. ಈ ವೇಳೆ ದೇವರ ಮನೆಗೆ ಬೆಂಕಿ ಹೊತ್ತಿಕೊಂಡು ಇಡೀ ಮನೆಗೆ ಹೊಗೆ ವ್ಯಾಪಿಸಿದೆ. ಗಾಬರಿಯಾದ ಮೂವರು ಎಲೆಕ್ಟ್ರಾನಿಕ್ ಲಾಕ್ಗೆ ತಪ್ಪಾದ ಕೋಡ್ ನಮೂದಿಸಿದ್ದಾರೆ. ಹೀಗಾಗಿ ಬಾಗಿಲು ತೆರೆಯಲಾರದೆ ಪರದಾಡಿದ್ದಾರೆ.
ಇದನ್ನು ಗಮನಿಸಿದ ಸಂಜಯ್ ಅವರ ಪುತ್ರ, ನೆರೆಮನೆಯವರ ಗಮನಕ್ಕೆ ತಂದು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಮೂವರನ್ನು ಆಸ್ಪತ್ರೆಗೆ ಸೇರಿದರೂ ಅಷ್ಟರ ಒಳಗಾಗಿಯೇ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.