ಧಾರವಾಡ: ಇಲ್ಲಿನ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಿದೆ.
ನಗರದ ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಜರುಗಿದ ವಿದ್ಯಾಪೋಷಕ “ವಿನಮ್ರ ಆರ್ಥಿಕ ನೆರವು” ಕಾರ್ಯಕ್ರಮದಲ್ಲಿ 152 ವಿದ್ಯಾರ್ಥಿಗಳಿಗೆ ₹27.81 ಲಕ್ಷ ನೆರವು ನೀಡಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಎಸ್. ಎಮ್ ಶಿವಪ್ರಸಾದ್, ರಾಘವೇಂದ್ರ ತಿಕೂಟ, ಶಶಿಕಾಂತ ಕುಲಗೋಡ, ಕಮಾಂಡರ್ ಅನುಪ ವಾಯ್ ಮತ್ತು ವಿರೇಶ ಹುಗ್ಗಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ ವಿಚಾರಗಳನ್ನು ತಿಳಿಸಿ ಪ್ರೋತ್ಸಾಹಿಸಿದರು. ವಿದ್ಯಾಪೋಷಕ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಮಾರಂಭ ಉದ್ದೇಶಿಸಿ ಸಂಸ್ಥೆಯ ರತ್ನಾ ಹಿಪ್ಪರಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಅನಿಸಿಕೆ:
ಸಂಸ್ಥೆಯಿಂದ ಆರ್ಥಿಕ ನೆರವು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸೃಷ್ಟಿ ಹೀರೆಮಠ ಹಾಗೂ ಮುರಗಯ್ಯಾ ಜಿ. ಅನಿಸಿಕೆ ಹಂಚಿಕೊಂಡು, ಗ್ರಾಮೀಣ ಪ್ರದೇಶದಿಂದ ಬಂದ ನಾವು, ಕುಟುಂಬದ ಆರ್ಥಿಕ ಸಮಸ್ಯೆಯಿಂದ ಶೈಕ್ಷಣಿಕ ಜೀವನ ಇಲ್ಲಿಗೆ ಮುಕ್ತಾಯವಾಗಿತ್ತು ಎಂದು ತಿಳಿದುಕೊಂಡಿದ್ದೇವು. ಆದರೆ, ವಿದ್ಯಾಪೋಷಕ ಸಂಸ್ಥೆಯ ನೆರವಿನಿಂದ ನಮ್ಮ ಉನ್ನತ ಶೈಕ್ಷಣಿಕ ವ್ಯಾಸಂಗ ಜೀವನ ಮುಂದುವರಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ವಿದ್ಯಾಪೋಷಕದ ದಾನಿಗಳು, ಸ್ವಯಂ ಸೇವಕರು, ವಿದ್ಯಾಪೋಷಕ ಸಮುದಾಯದ ಸದಸ್ಯರು ಹಾಗೂ ವಿದ್ಯಾಪೋಷಕ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.




