ರಾಮನಗರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ 28 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದರು. ಇದನ್ನು ಸಹಿಸಲಾಗದೇ ಕಾಂಗ್ರೆಸ್ನವರೇ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿದರು ಎಂದು ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರೇ ಹಠ ಮಾಡಿ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ತೆಗೆದರು ಎಂದು ಕಿಡಿಕಾರಿದರು.
ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ 2000 ರು. ಜಮೆ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ. ಈಗ 5 ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರಲ್ಲಿಯೇ ಗ್ಯಾರಂಟಿಗಳ ಕುರಿತು ಅಪಸ್ವರ ಎದ್ದಿದೆ ಎಂದು ಟೀಕಿಸಿದರು.
ನನಗೆ ನಿಂತು ಮಾತಾಡೋದಕ್ಕೆ ಕಾಲಲ್ಲಿ ನೋವಿದೆ. ಅದಕ್ಕೆ ಕುಳಿತು ಮಾತನಾಡುತ್ತಾ ಇದ್ದೀನಿ. ನಾನು ರೈತನ ಮಗ, 90 ವರ್ಷ ವಯಸ್ಸಾಗಿದೆ. ನನಗೆ ಸರಿಸಮನಾಗಿ ಎಸ್.ಎಂ. ಕೃಷ್ಣ ಒಬ್ಬರೇ ಇರೋದು. ಅವರು ಎಲ್ಲೂ ಬರಲ್ಲ, ದೇವೇಗೌಡರು ಯಾಕೆ ಬರುತ್ತಾರೆ? ಮೊಮ್ಮಗನ ಗೆಲ್ಲಿಸಲು ಬರುತ್ತಾರೆ. 90 ವರ್ಷ ವಯಸ್ಸಾದರೂ ಬರ್ತಾನಲ್ಲ, ಹುಚ್ಚು ಹಿಡಿದಿದ್ಯಾ ಅಂತಾ ಎದುರಾಳಿಗಳು ಮಾತನಾಡುತ್ತಿದ್ದಾರೆ. 50 ವರ್ಷಗಳ ಹಿಂದೆ ಚನ್ನಪಟ್ಟಣಕ್ಕೆ ಬಂದು ಕಾಂಗ್ರೆಸ್ ಸೋಲಿಸಿದ ವ್ಯಕ್ತಿ ನಾನು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾನೆ. ಹಾಗಾಂತ ನಾನು ಮೊಮ್ಮಗನನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಬಂದಿದ್ದೇನೆ ಎಂದರು.