ನವದೆಹಲಿ: ಇದುವರೆಗೆ 10 ರಾಜ್ಯಗಳಿಗೆ ಹಕ್ಕಿಜ್ವರ ಹರಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ದೆಹಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳಲ್ಲಿ ಸೋಮವಾರ ಹಕ್ಕಿಜ್ವರ ಕಂಡುಬಂದಿದೆ.
ಇನ್ನು ಗುಜರಾತ್ನ ಟೋಂಕ್, ಕರೌಲಿ, ಭಿಲ್ವಾರಾ, ವಲ್ಸಾದ್, ವಡೋದರಾ ಮತ್ತು ಸೂರತ್ ಜಿಲ್ಲೆಗಳಲ್ಲಿ ಕಾಗೆಗಳು, ವಲಸೆ ಹಕ್ಕಿಗಳು ಮತ್ತು ಕಾಡು ಪಕ್ಷಿಗಳು ಹಕ್ಕಿಜ್ವರದಿಂದ ಮೃತಪಟ್ಟಿವೆ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ. ಉತ್ತರಾಖಂಡದ ಕೋಟ್ದ್ವಾರ್ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ ಕಾಗೆಗಳು ಸತ್ತಿವೆ ಎಂದು ವರದಿಯಾಗಿದ್ದು, ಪೂರ್ವ ದೆಹಲಿಯ ಸಂಜಯ್ ಸರೋವರ ಪ್ರದೇಶದಲ್ಲಿ ಕಾಗೆಗಳು ಮತ್ತು ಬಾತುಕೋಳಿಗಳು ಹಕ್ಕಿಜ್ವರ ಸಾವನ್ನಪ್ಪಿ ಎಂದು ತಿಳಿಸಿದೆ.
ಇನ್ನು ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಕೋಳಿಗಳಿಗೆ ಹಕ್ಕಿಜ್ವರ ಇರುವುದು ಪತ್ತೆಯಾಗಿದೆ. ಮುಂಬೈ, ಥಾಣೆ, ಡಪೋಲಿ ಮತ್ತು ಬೀಡ್ನಲ್ಲೂ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿವೆ. ಹಕ್ಕಿಜ್ವರ ಕುರಿತು ಸುಳ್ಳು ಮಾಹಿತಿ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸಲಹೆ ನೀಡಿದೆ.
ಜಲ ಸಂಪನ್ಮೂಲಗಳು, ಪಕ್ಷಿ ಮಾರುಕಟ್ಟೆಗಳು, ಪ್ರಾಣಿಸಂಗ್ರಹಾಲಯಗಳು ಮತ್ತು ಕೋಳಿ ಸಾಕಾಣಿಕೆ ಕೇಂದ್ರಗಳ ಸುತ್ತಲೂ ಕಣ್ಗಾವಲು ಹೆಚ್ಚಿಸಬೇಕು ಮತ್ತು ಸತ್ತ ಪಕ್ಷಿಗಳನ್ನು ವಿಲೇವಾರಿ ಮಾಡುವಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ದೇಶದಲ್ಲಿ ಹಕ್ಕಿಜ್ವರ ಪ್ರಕರಣಗಳ ನಡುವೆಯೂ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಬಾರದು ಮತ್ತು ಮಾರುಕಟ್ಟೆಗಳನ್ನು ಮುಚ್ಚಬಾರದು ಎಂದು ಕೇಂದ್ರ ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಸೋಮವಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ. ಹಕ್ಕಿಜ್ವರ ಪಕ್ಷಿಗಳಿಂದ ಜಾನುವಾರುಗಳಿಗೆ ಮನುಷ್ಯರಿಗೆ ಹರಡಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ.