ಬೆಂಗಳೂರು: ದ್ರಾವಿಡ ಕುಲಕ್ಕೆ ಸೇರಿದ ಕನ್ನಡಿಗರು ಮತ್ತು ತಮಿಳರ ನಡುವೆ ಎಂದಿಗೂ ಸಾಮರಸ್ಯ ಇರಬೇಕು. ನಮ್ಮಲ್ಲಿ ಯಾವುದೇ ಭೇದ ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಮಾತೃಭಾಷಾ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕದ ಕನ್ನಡಿಗರು ಹಾಗೂ ತಮಿಳರು ಸಾಂಸ್ಕೃತಿಕ ಮತ್ತು ಒಗ್ಗಟ್ಟಿನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಸಾಮರಸ್ಯತೆಯನ್ನು ಬಯಸುತ್ತಾರೆ. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮಿಳರು ಮತ್ತು ಕನ್ನಡಿಗರ ನಡುವೆ ಬಾಂಧವ್ಯ ಗಟ್ಟಿಗೊಳಿಸಿದ್ದೆವು. ಹಲಸೂರಿನಲ್ಲಿ ನನೆಗುದಿಗೆ ಬಿದ್ದಿದ್ದ ತಿರುವಳ್ಳವರ್ ಪ್ರತಿಮೆ ಯೋಜನೆ ಮುಗಿಸಿ ಎರಡೂ ಭಾಷಿಕರ ನಡುವೆ ಭಾತೃತ್ವ ಮೂಡಿಸಿದ್ದೆವು. ಆಗಿನ ಮುಖ್ಯಮಂತ್ರಿ ಕರುಣಾನಿಧಿ ಜತೆ ಮಾತನಾಡಿ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ನಿರ್ಮಿಸಲು ಕೋರಿದ್ದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿ ಬಾರಿಯೂ ಕರ್ನಾಟಕದಲ್ಲಿರುವ ತಮಿಳರ ಏಳಿಗೆಗೆ ಪ್ರಯತ್ನಿಸಿದ್ದೆ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಸಿದ್ದೆ. ಮುಂದೆಯೂ ಅದೇ ರೀತಿ ಇರಲು ಬಯಸುವೆ ಎಂದು ಹೇಳಿದರು.
ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿ, ದ್ರಾವಿಡ ಭಾಷಾ ಪ್ರದೇಶಗಳ ಮೇಲೆ ಹಿಂದಿ ಹೇರಿಕೆ ದಬ್ಬಾಳಿಕೆ ವಿರುದ್ಧ ದಕ್ಷಿಣ ಭಾರತದ ಜನರು, ರಾಜಕಾರಣಿಗಳು ಧ್ವನಿ ಎತ್ತಬೇಕು ಕನ್ನಡ, ತಮಿಳು ತೆಲುಗು, ಮಲಯಾಳಂ ಸೇರಿದಂತೆ ಇವೆಲ್ಲ ದ್ರಾವಿಡ ಮೂಲದಿಂದ ಬಂದ ಭಾಷೆಗಳು. ನಮ್ಮ ವಿರೋಧ ಇರಬೇಕಾದುದು ಕೇವಲ 650 ವರ್ಷ ಇತಿಹಾಸವಿರುವ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದಾದರೆ 2300 ವರ್ಷ ಇತಿಹಾಸವುಳ್ಳ ಕನ್ನಡ, ತಮಿಳು, ತೆಲುಗು ರಾಷ್ಟ್ರಭಾಷೆ ಯಾಕಾಗಬಾರದು ಎಂದು ಅವರು ಪ್ರಶ್ನಿಸಿದರು.