ನಕಲಿ ವೋಟರ್‌ ಐಡಿ ಕೇಸಲ್ಲಿ ಮುನಿರತ್ನಗೆ ಪೊಲೀಸ್ ಸಹಾಯ: ಮುನಿರಾಜುಗೌಡ ದೂರು

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣದ ತನಿಖೆ ವಿಳಂಬವಾಗಿದ್ದು, ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಪಿ.ಎಂ.ಮುನಿರಾಜುಗೌಡ ಅವರು ನಗರ…

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣದ ತನಿಖೆ ವಿಳಂಬವಾಗಿದ್ದು, ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಪಿ.ಎಂ.ಮುನಿರಾಜುಗೌಡ ಅವರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರಿಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಹೈಕೋರ್ಟ್‌ನ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸೆಗಿರುವ ತನಿಖಾಧಿಕಾರಿಗಳು ಹಾಗೂ ಪ್ರಕರಣದ ಉಸ್ತುವಾರಿಗಳಾಗಿದ್ದ ಡಿಸಿಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುನಿರಾಜುಗೌಡ ಮನವಿ ಮಾಡಿದ್ದಾರೆ.
ನಕಲಿ ವೋಟರ್‌ ಐಟಿ ಹಗರಣ ಸಂಬಂಧ ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಅಪರಾಧ ಸಂಖ್ಯೆ 55ರ ಪ್ರಕರಣದ ಕಡತವು 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇದಕ್ಕೆ ಜೋಡಣೆಯಾಗಿರುವ ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ಜಾಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ಗಳು ಮತ್ತು ಪೂರ್ವ ವಿಭಾಗದ ಡಿಸಿಪಿಗಳು ಸೇರಿಕೊಂಡು ಮುನಿರತ್ನನನ್ನು ಬಂಧನದಿಂದ ಪಾರು ಮಾಡಲು ನ್ಯಾಯಾಲಯವನ್ನು ಯಾಮಾರಿಸಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು ವಿಚಾರಣಾಧಿಕಾರದ ವ್ಯಾಪ್ತಿಯೇ ಇರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಉಳಿಸಿದ್ದಾರೆ. ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ಈ ಪ್ರಕರಣದಲ್ಲಿ ತನಿಖೆ ಮಾಡಿರುವ ಸಬ್‌ ಇನ್‌ಸ್ಪೆಕ್ಟರ್‌ಗಳು ಮತ್ತು ಇನ್‌ಸ್ಪೆಕ್ಟರ್‌ಗಳು ಹಾಗೂ ಪ್ರಕರಣದ ಉಸ್ತುವಾರಿ ವಹಿಸಿದ್ದ ಪೂರ್ವ ವಿಭಾಗದ ಎಲ್ಲಾ ಡಿಸಿಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಪರಾಧ ಸಂಖ್ಯೆ 54ರ ಪ್ರಕರಣದ ಕಡತವನ್ನು 8ನೇ ಎಸಿಎಂಎಂ ನ್ಯಾಲಯದಿಂದ ಪ್ರಕರಣದ ವಿಚಾರಣಾಧಿಕಾರದ ವ್ಯಾಪ್ತಿಯುಳ್ಳ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಸಾಕ್ಷಿಗಳ ಹೇಳಿಕೆ ದಾಖಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.