ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಮತ್ತು ಪ್ರಸಿದ್ಧ ಸುಕ್ಷೇತ್ರ ಉಚ್ಚಂಗಿದುರ್ಗದಲ್ಲಿ ಯುಗಾದಿ ಹಬ್ಬದ ಉತ್ಸವಾಂಭೆ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು ಅಪಾರ ಸಂಖ್ಯೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರ ದಂಡೆ ಹರಿದು ಬರುತ್ತಿದೆ.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಉಚ್ಚಂಗಿದುರ್ಗವನ್ನು ಕರ್ನಾಟಕದ ಗ್ವಾಲಿಯರ್ ಕೋಟೆ ಎಂದು ಸಹ ಕರೆಯುತ್ತಾರೆ, 5ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ತಾಯಿ ಉಚ್ಚಂಗೆಮ್ಮನ ನಾಮ ಜಪ ಮಾಡುತ್ತಾ “ಉಚ್ವಂಗೆಮ್ಮ ನಿನ್ಗ್ ನಾಕ್ ಉಧೋ…ಉಧೋ…” ಎಂದು ಘೋಷಣೆಗಳನ್ನು ಕೂಗುತ್ತಾ ಭಕ್ತರು ಮೈ ಮರೆಯುತ್ತಾರೆ.
ಯುಗಾದಿ ಹಬ್ಬದಂದು ಬರುವ ದೇವಿಯ ಜಾತ್ರೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು. ಯುಗಾದಿ ಹಬ್ಬದ ಸಮಯದಲ್ಲಿ ಭಕ್ತರು ದೇವಿಗೆ ವಿಶೇಷವಾದ ಪೂಜೆಗಳನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ, ಇನ್ನೂ ಈ ಐತಿಹಾಸಿಕ ಯುಗಾದಿ ಮಹೋತ್ಸವಕ್ಕೆ ಮೆರಗು ತಂದವರು ವೀರ ಪಾಳೆಗಾರರು, ಅಂದಿನ ಉಚ್ಚಂಗಿದುರ್ಗದ ದಾದಯ್ಯ ನಾಯಕ ಮತ್ತು ರಂಗಣ್ಣ ನಾಯಕರ ಕಾಲದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು, ಅದು ಇಂದಿಗೂ ಆ ಆಚರಣೆಗಳು ಜೀವಂತವಾಗಿವೆ.ಉಚ್ಚಂಗೆಮ್ಮ ದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಮಾಡಿಕೊಂಡ ಅಂದಿನ ನಾಯಕರು, ದೇವಿಗೆ ಯುಗಾದಿ ಹಬ್ಬದಂದು ವಿಶೇಷ ಪೂಜೆಗಳು ಮತ್ತು ಆಚರಣೆಗಳನ್ನು ಜಾರಿಗೆ ತಂದರು.
ಮೊದಲ ದಿನ ದೇವಿಗೆ ವಿಶೇಷ ಪೂಜೆಗಳನ್ನು ನೆರವೇರಿಸದರೆ, ಎರಡನೇ ದಿನ ಹೊಕಳಿ ಉತ್ಸವ ನಡೆಯುತ್ತದೆ. ಹೊಕಳಿ ಉತ್ಸವದ ದಿನದಂದು ತಾಯಿಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ, ನಂತರ ಅತಿ ವಿಜೃಂಭಣೆಯಿಂದ ಬೆಟ್ಟದಿಂದ ತಾಯಿಯನ್ನು ಕೆಳಗಿರುವ ಪಾದಗಟ್ಟೆಗೆ ಕರೆತರಲಾಗುತ್ತದೆ, ಅಂದು ಉಚ್ಚಂಗಿದುರ್ಗದ ಪಾಳೇಗಾರರ ಮನೆತನದವರು, ದೇವಿಯ ಸಮ್ಮುಖದಲ್ಲಿ ಹೋಕಳಿ ಕಾಯಿಯನ್ನು ಹರಿಯುವುದು ವಿಶೇಷ, ಮತ್ತು ಸ್ವತಃ ದೇವಿಯೇ ಹೋಕಳಿ ಉತ್ಸವದಲ್ಲಿ ಭಾಗಿಯಾಗಿ ಸಂತೋಷ ಪಡುತ್ತಾಳೆ ಎಂದು ಅಲ್ಲಿನ ಜನರ ಒಂದು ನಂಬಿಕೆಯಾಗಿದೆ.
ಮೊದಲು ಬೆಟ್ಟದ ಮೇಲಿರುವ ಶ್ರೀ ಉತ್ಸವಾಂಭೆಯ ದರ್ಶನ ಪಡೆದು ನಂತರ ಅಲ್ಲಿಂದ ಸುಮಾರು 5ಕಿ.ಮೀ ದೂರದಲ್ಲಿರುವ ಅಡವಿ ಹಾಲಮ್ಮನ ದರ್ಶನ ಪಡೆಯುವುದು ವಿಶೇಷ.