ಶಿರಸಿ: ಗಾಂಜಾ ಸೇವಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಕೆಂಗ್ರೆ ಹೊಳೆ ಬಳಿ ನಡೆದಿದೆ. ಬಕ್ಕಳದ ಕಾರೆಬೈಲ್ ನಿವಾಸಿ ರಾಜಾರಾಮ ಸುಬ್ರಾಯ್ ಹೆಗಡೆ(58) ಹಾಗೂ ಜಡ್ಡಿಗದ್ದೆಯ ಪರಮೇಶ್ವರ ನೀಲಕಂಠ ಭಟ್ಟ(38) ಬಂಧಿತ ಆರೋಪಿಗಳು.
ಗುರುವಾರ ಮದ್ಯಾಹ್ನ 3 ಗಂಟೆ ಸುಮಾರಿಗೆ ಇಬ್ಬರೂ ಆರೋಪಿಗಳು ಕೆಂಗ್ರೆ ಹೊಳೆ ಸಮೀಪ ಹುಲೇಕಲ್ ರಸ್ತೆಯಲ್ಲಿ ಧೂಮಪಾನ ಮಾಡುತ್ತಾ ನಿಂತಿದ್ದರು. ಈ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಪಿಎಸ್ಐ ದಯಾನಂದ ಜೋಗಳೇಕರ್ ಅನುಮಾನ ಬಂದು ಇಬ್ಬರನ್ನೂ ಮಾತನಾಡಿಸಿದ್ದಾರೆ. ಆದರೆ ಮಾತನಾಡುವಾಗ ಇಬ್ಬರೂ ತೊದಲಿಕೊಂಡು ಮಾತನಾಡಿದ್ದು ಅನುಮಾನಗೊಂಡ ಪೊಲೀಸರು ಇಬ್ಬರೂ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು.
ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ವೈದ್ಯರು ವರದಿ ನೀಡಿದ್ದರು. ಅದರಂತೆ ಇಬ್ಬರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.