ಜೀವ-ದೇವ ಅದ್ವೈತಕ್ಕೆ ಜೀವ-ಜೀವಗಳ ಅದ್ವೈತ ಪೀಠಿಕೆ: ರಾಘವೇಶ್ವರ ಶ್ರೀ

ಗೋಕರ್ಣ: ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ನಮಗೆ ನಮ್ಮ ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ…

ಗೋಕರ್ಣ: ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ನಮಗೆ ನಮ್ಮ ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಮೂರು ದಿನಗಳ ಕಾಲ ನಡೆದ ಹವ್ಯಕ ಮಹಾಮಂಡಲೋತ್ಸವ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ಮಹಾಮಂಡಲೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸಮಾಜದ ಎಲ್ಲ ವಯೋಮಾನದವರು ಇಲ್ಲಿ ಭಾಗವಹಿಸಿ ಪರಸ್ಪರ ಖುಷಿಯನ್ನು ಹಂಚಿಕೊಂಡು ನಕ್ಕು ನಲಿಯುವ ಹಬ್ಬ. ಈ ಬಾರಿ ಇಂಥ ಮಹಾಮಂಡಲೋತ್ಸವಕ್ಕೆ ಶಕಟಪುರ ಶ್ರೀಗಳ ಸಾನ್ನಿಧ್ಯ ದೊರಕಿದೆ ಎಂದು ಬಣ್ಣಿಸಿದರು.

Vijayaprabha Mobile App free

ಶಕಟಪುರ ಶ್ರೀಗಳ ಜತೆಗಿನ ಆತ್ಮೀಯ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು, ಹಲವು ಯತಿಗಳ ಜತೆ ಸಂವಾದ, ಭಾವಾದ್ವೈತ ನಡೆದರೂ, ಶಕಟಪುರ ಸ್ವಾಮೀಜಿಯವರ ಜತೆಗಿನ ಸಮಾಗಮ ಅವಿಸ್ಮರಣೀಯ. ಇದು ಮಠ, ಯತಿಗಳು ಮತ್ತು ಶಿಷ್ಯರ ನಡುವಿನ ಅದ್ವೈತ ಎಂದು ವಿಶ್ಲೇಷಿಸಿದರು. 

ವೃಷ ಎಂದರೆ ಧರ್ಮಸ್ವರೂಪ. ಇದನ್ನು ಧರ್ಮದ ಪ್ರತೀಕವಾಗಿ ಕೊಡುಗೆಯಾಗಿ ನೀಡಿದ್ದೇವೆ. ಸ್ವತ್ತುಗಳಿಗಿಂತ ಸಂಬಂಧ ದೊಡ್ಡದು. ಸಂಬಂಧ ಜೀವಚೈತನ್ಯವನ್ನು ಹೊಂದಿರಬೇಕು. ಸ್ವತ್ತುಗಳು ನಿರ್ಜೀವ ಎಂದು ವಿವರಿಸಿದರು. ಶಕಟಪುರ ಶ್ರೀಗಳ ಗೌರವಾರ್ಥವಾಗಿ ಸುವರ್ಣ ಮಂಟಪ ಸೇವೆಯನ್ನು ನೆರವೇರಿಸಲಾಗುತ್ತಿದೆ ಎಂದರು.

ಶ್ರೀಕ್ಷೇತ್ರ ಶಕಟಪುರಿ ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ತೋಟದಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಲ್ಕು ಪುರುಷುರಾರ್ಥ, ನಾಲ್ಕು ವೇದಗಳು, ನಾಲ್ಕು ಮುಕ್ತಿಗಳು, ಬ್ರಹ್ಮನ ನಾಲ್ಕು ಮುಖಗಳು ಪುರುಷರೂಪ ತಾಳಿ ಶಂಕರಾಚಾರ್ಯರ ನಾಲ್ವರು ಶಿಷ್ಯರನ್ನು ಕವಿಗಳು ಬಣ್ಣಿಸಿದ್ದಾರೆ. ಅಂಥ ಶಿಷ್ಯರನ್ನು ಹೊಂದಿದ ಶಂಕರರು ಸಾಕ್ಷಾತ್ ಪರಶಿವನ ಅವತಾರ. ಶಂಕರರ ನಾಲ್ವರು ಶಿಷ್ಯರು ಒಂದೊಂದು ಸಂದೇಶವನ್ನು ಜಗತ್ತಿಗೆ ಸಾರಿದವರು ಎಂದು ವಿವರಿಸಿದರು.

ಪಾಂಡಿತ್ಯ ಎಷ್ಟಿದ್ದರೂ ಗುರುಭಕ್ತಿ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಆಚಾರ್ಯ ಪದ್ಮಪಾದಾಚಾರ್ಯರು ಜಗತ್ತಿಗೆ ತೋರಿಸಿಕೊಟ್ಟರು. ಹಸ್ತಾಮಲಕಾರ್ಯರು ಯೋಗಶಾಸ್ತ್ರಕ್ಕಿಂತ ಜ್ಞಾನಮಾರ್ಗ ಶ್ರೇಷ್ಠ ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು. ಗುರುಭಕ್ತಿಯಿಂದ ಜ್ಞಾನ ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದವರು ತೋಟಕಾಚಾರ್ಯರು. ಆಚಾರ್ಯರ ವಯೋವೃದ್ಧ, ಜ್ಞಾನವೃದ್ಧ ಶಿಷ್ಯರು ಸುರೇಶ್ವರಾಚಾರ್ಯರು. ಕರ್ಮಮಾರ್ಗ ತ್ಯಾಗ ಮಾಡಿದಾಗ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ತೋರಿಸಿದವರು ಇವರು ಎಂದು ಬಣ್ಣಿಸಿದರು.

ಹನ್ನೆರಡು ವರ್ಷಗಳ ಹಿಂದೆ ಶ್ರೀರಾಮಚಂದ್ರಾಪುರ ಮಠ ಮತ್ತು ಶಕಟಪುರಿಯ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿತು. ಉಭಯ ಮಠಗಳ ಸ್ನೇಹಸಂಬಂಧ ಸ್ಥಿರವಾದದ್ದು. ಯಾರೂ ಬಿಡಿಸಲಾಗದಂಥದ್ದು. ಅಮೂಲ್ಯ, ಅನಘ್ರ್ನ ಸ್ನೇಹವನ್ನು ಹನ್ನೆರಡು ವರ್ಷಗಳ ಕಾಲ ಪ್ರತೀಕ್ಷೆ ನಡೆಸಿ ಪಡೆದಂಥದ್ದು ಎಂದು ಹೇಳಿದರು.

ಶ್ರೀಕ್ಷೇತ್ರ ಹೊಸೂರಿನ ಕೃಷ್ಣಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಕಟಪುರಿ ಆಡಳಿತಾಧಿಕಾರಿ ಎಂ.ಚಂದ್ರಮೌಳೀಶ್ವರ, ಶ್ರೀಮಠದ ರಾಘವ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾದಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಸಾದ್ ಎಂ, ಜಿ.ಜಿ.ಹೆಗಡೆ ತಲೆಕೇರಿ, ವೀಣಾ ಗೋಪಾಲಕೃಷ್ಣ ಪುಳು, ರುಕ್ಮಾವತಿ ಸಾಗರ, ವೆಂಕಟೇಶ ಹಾರೇಬೈಲ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹಿರಿಯ ಅಭಿಯೋಜಕರಾದ ಅರುಣ್‍ಶ್ಯಾಮ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ವಿ.ಹೆಗಡೆ, ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಹೊನ್ನಾವರ ಮಂಡಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಪ್ರಶಾಂತ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡೆ ಎನ್ನುವುದು ಮಿನಿ ಯುದ್ಧ: ಆದರೆ ಯುದ್ಧ ಸಂಬಂಧಗಳನ್ನು ಕೆಡಿಸಿದರೆ ಕ್ರೀಡೆ ಸಂಬಂಧಗಳನ್ನು ಬೆಸೆಯುವಂಥದ್ದು ಎಂದು ಹವ್ಯಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಅಭಿಪ್ರಾಯಪಟ್ಟರು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಮಂದಿ ಕ್ರೀಡಾ ಹಾಗೂ ಬೌದ್ಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.