ದಾಂಡೇಲಿ: ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟಿಯೊಂದು ಹೊತ್ತಿ ಉರಿದ ಘಟನೆ ನಗರದ ಸೋಮಾನಿ ವೃತ್ತದ ಬಳಿ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸೋಮಾನಿ ವೃತ್ತದಲ್ಲಿರುವ ಅಶೋಕ ಮೇಸ್ತ್ರಿ ಎಂಬುವವರ ಗ್ಯಾರೇಜ್ಗೆ ಇಲ್ಲಿನ ಟೌನ್ಶಿಪ್ ನಿವಾಸಿಯೊಬ್ಬರು ತಮ್ಮ ಆ್ಯಕ್ಟಿವಾ ಸ್ಕೂಟಿಯನ್ನು ರಿಪೇರಿಗೆಂದು ತಂದಿದ್ದರು. ಈ ವೇಳೆ ಮೆಕ್ಯಾನಿಕ್ ಅಶೋಕ್ ವಾಹನವನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿಯೇ ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಮೆಕ್ಯಾನಿಕ್ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗೂ ಕರೆ ಮಾಡಿದ್ದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ದೌಡಾಯಿಸುವ ವೇಳೆಗಾಗಲೇ ಸ್ಕೂಟಿ ಬೆಂಕಿಯ ಜ್ವಾಲೆಯಲ್ಲಿ ಬೆಂದುಹೋಗಿದೆ. ಕೊನೆಗೂ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.