ಮುಂಡಗೋಡ: ತಾಲ್ಲೂಕಿನ ಸಾಲಗಾವಿ ಗ್ರಾಮದ ಗೌಡನಕಟ್ಟೆ ಕೆರೆಯ ಬಳಿ ತೆರಳಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ. ಪರಶುರಾಮ ಹನ್ಮಂತಪ್ಪ ದುರಮುರ್ಗಿ(15) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ.
ಬಾಲಕ ಪರಶುರಾಮ ಭಾರೀ ಮಳೆಗೆ ತುಂಬಿದ್ದ ಗ್ರಾಮದ ಗೌಡನಕಟ್ಟೆ ಕೆರೆಯನ್ನು ನೋಡಿಕೊಂಡು ಬರುವುದಾಗಿ ಮನೆಯಿಂದ ತೆರಳಿದ್ದ. ಆದರೆ ತುಂಬಾ ಹೊತ್ತಾದರೂ ಬಾಲಕ ಬರದಿದ್ದಾಗ ಮನೆಯವರು ಕೆರೆಯ ಬಳಿ ತೆರಳಿ ಪರಿಶೀಲಿಸಿದ್ದು, ಈ ವೇಳೆ ಕೆರೆಯ ದಡದಲ್ಲಿ ಬಾಲಕನ ಬಟ್ಟೆ ಪತ್ತೆಯಾಗಿದೆ.
ಆತಂಕಗೊಂಡ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರೊಂದಿಗೆ ಸೇರಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು ಬಾಲಕನಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ.