ದಾವಣಗೆರೆ : ನ್ಯಾಮತಿ ಪಟ್ಟಣದ ತಾಲೂಕು ಕಚೇರಿಯಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಹೌದು, ಶಿವಮೊಗ್ಗ ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶನಾಯ್ಕ (40) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಜಮೀನು ವಿವಾದದ ಆದೇಶ ತನ್ನ ಪರವಾಗಿ ಬರಲಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರಗೊಂಡು ತಹಶೀಲ್ದಾರ್ ಕಚೇರಿ ಮುಂದೆಯೇ ಲೋಕೇಶ್ ನಾಯ್ಕ ಆತ್ಮಹತ್ಯೆ ಯತ್ನಿಸಿದ್ದಾನೆ.
ಸ್ಥಳದಲ್ಲಿದ್ದವರು ಬಿಡಿಸಿದರೂ ಬಿಡದೆ ವಿಷ ಸೇವಿಸಲು ಯತ್ನಿಸಿದ ಲೋಕೇಶ್ ನಾಯ್ಕ್ ನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
ನ್ಯಾಮತಿ ತಾಲ್ಲೂಕಿನ ಲಕ್ಕಿನಕೊಪ್ಪ ಗ್ರಾಮದ 4 ಎಕರೆ ಜಮೀನಿಗೆ ಸಂಬಂಧಪಟ್ಟಂತೆ ದಾಯಾದಿಗಳ ಕಲಹವಾಗಿದ್ದು, ಈ ಪ್ರಕರಣ ತಾಲ್ಲೂಕು ದಂಡಾಧಿಕಾರಿ ಅವರ ಆರ್.ಆರ್.ಟಿ ಕೋರ್ಟ್ನಲ್ಲಿ ನಡೆದಿದ್ದು, ಪ್ರಕರಣದ ತೀರ್ಪು ಲೋಕೇಶ ಚಿಕ್ಕಪ್ಪನ ಮಕ್ಕಳ ಪರ ಬಂದಿದೆ.
ಈ ಹಿನ್ನೆಲೆಯಲ್ಲಿ ಲೋಕೇಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆ ಕುರಿತಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಹಶೀಲ್ದಾರ್ ಎಂ.ರೇಣುಕಾ ಮಾಹಿತಿ ನೀಡಿದ್ದಾರೆ.
ಇನ್ನು, ನ್ಯಾಮತಿ ಪಿ.ಎಸ್.ಐ ರಮೇಶ, ಎಎಸ್ಐ ಚಂದ್ರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




