ಅಥಣಿ: ಹಾಡಹಗಲೇ ಆಗಂತುಕರಿಬ್ಬರು ಆಗಮಿಸಿ ಇಬ್ಬರು ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಆತಂಕಕಾರಿ ಘಟನೆ ಅಥಣಿಯಲ್ಲಿ ನಡೆದಿದೆ. ಪಟ್ಟಣದ ಸ್ವಾಮಿ ಅಪಾರ್ಟ್ಮೆಂಟ್ ನಿವಾಸಿಗಳಾದ ಸ್ವಸ್ತಿ ವಿಜಯ ದೇಸಾಯಿ(4) ಹಾಗೂ ವಿಯೋಮ್ ವಿಜಯ ದೇಸಾಯಿ(4) ಅಪಹರಣಕ್ಕೊಳಗಾದ ಮಕ್ಕಳಾಗಿದ್ದಾರೆ.
ಗುರುವಾರ ಮಧ್ಯಾಹ್ನದ ವೇಳೆಗೆ ಸ್ವಿಫ್ಟ್ ಕಾರಿನಲ್ಲಿ ಬಂದ ಆಗಂತುಕರಿಬ್ಬರು ಗೇಟ್ ತೆಗೆದುಕೊಂಡು ನೇರವಾಗಿ ಅಪಾರ್ಟ್ಮೆಂಟ್ ಪ್ರವೇಶಿಸಿದ್ದಾರೆ. ಬಳಿಕ ಅಲ್ಲಿಯೇ ಆಟವಾಡಿಕೊಂಡಿದ್ದ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದ ಮನೆಯವರು ಬಳಿಕ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಮಕ್ಕಳು ಕಿಡ್ನ್ಯಾಪ್ ಆಗಿರುವುದು ಬೆಳಕಿಗೆ ಬಂದಿದೆ.
ಕ್ಯಾಪ್ ಧರಿಸಿದ್ದ ಮಕ್ಕಳ ಅಪಹರಣಕಾರರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಗಂತುಕರು ಬಂದಿದ್ದ ಬಿಳಿ ಬಣ್ಣದ ಸ್ವಿಫ್ಟ್ ಕಾರು ಸಹ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಧಾವಿಸಿದ ಅಥಣಿ ಪೊಲೀಸರು ಮಕ್ಕಳ ಕುರಿತು ಮಾಹಿತಿ ಪಡೆದು ದೂರು ದಾಖಲಿಸಿಕೊಂಡಿದ್ದು ಮಕ್ಕಳ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.