Neem and jaggery on Ugadi : ಹಿ೦ದೂ ಸಂಪ್ರದಾಯದಂತೆ ಯುಗಾದಿ ಹಬ್ಬವು ಹೊಸ ಯುಗ, ವರ್ಷ & ಭವಿಷ್ಯದ ಆರಂಭವಾಗಿದೆ ಎ೦ದು ನಂಬಲಾಗುತ್ತದೆ. ಈ ದಿನ ಮನುಷ್ಯ ಬೇವು-ಬೆಲ್ಲ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂದು ವೈಜ್ಞಾನಿಕವಾಗಿಯೂ ತಿಳಿದು ಬ೦ದಿದೆ. ಏನೆಲ್ಲಾ ಲಾಭಗಳು ಈ ಲೇಖನದಲ್ಲಿ ತಿಳಿಯೋಣ.
ಯುಗಾದಿಯಿಂದ ಭವಿಷ್ಯ ಬದಲಾಗುತ್ತೆ
ಯುಗಾದಿ ದಿನದಿಂದ ಮನುಷ್ಯನ ಭವಿಷ್ಯ ಚಕ್ರ ಸಹ ಬದಲಾಗುತ್ತದೆ ಎನ್ನಲಾಗುತ್ತದೆ. ವರ್ಷದ ಭವಿಷ್ಯವು ಯುಗಾದಿ ದಿನದಿಂದ ಪ್ರಾರಂಭವಾಗುತ್ತದೆ. ಜ್ಯೋತಿಷಿಗಳು ಸಹ ಭವಿಷ್ಯವನ್ನು ಹೇಳಲು ಯುಗಾದಿ ಹಬ್ಬದಿಂದ ಆರಂಭವಾಗುವ ಸಂವತ್ಸರವನ್ನೇ ಪರಿಗಣಿಸಲಾಗುತ್ತಿದ್ದು, ಹೊಸ ಪಂಚಾಂಗವು ಯುಗಾದಿ ಹಬ್ಬದಿಂದಲೇ ಶುರುವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರಕ್ಕೆ ಆಧಾರ
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಕೆಲಸ ಮಾಡಲು ಪಂಚಾಂಗವನ್ನು ನೋಡಲಾಗುತ್ತದೆ. ಪಂಚಾಂಗದಲ್ಲಿ ಖಗೋಳ ಅಥವಾ ಹವಾಮಾನ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಆಕಾಶ ವಸ್ತುಗಳ ಭವಿಷ್ಯದ ಸ್ಥಾನಗಳು, ನಕ್ಷತ್ರದ ಪ್ರಮಾಣಗಳು & ನಕ್ಷತ್ರಪುಂಜಗಳ ಪರಾಕಾಷ್ಠೆಯ ದಿನಾಂಕಗಳು ಇರುತ್ತದೆ.
ಬೇವು-ಬೆಲ್ಲದ ಮಹತ್ವ
ಯುಗಾದಿಗೆ ಕರ್ನಾಟಕದಲ್ಲಿ ಬೇವು-ಬೆಲ್ಲ ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿ೦ಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥ ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎನ್ನುತ್ತಾರೆ.
ವೈಜ್ಞಾನಿಕ ಕಾರಣ ಬೇವು
ವಸಂತ ಋತುವಿನ ಆರಂಭದೊಂದಿಗೆ ಸಮೃದ್ಧವಾಗಿ ಬೆಳೆಯುವ ಬೇವು ಇಡೀ ವರ್ಷ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುವುದಲ್ಲದೆ, ಬೇವಿನ ಕಹಿ ಬೆಲ್ಲದ ಜೊತೆಗೆ ಸೇವಿಸಿದರೆ ಪಿತ್ತದ ಅಂಶ ಕಡಿಮೆಯಾಗಿ ದೇಹ ತಂಪಾಗುತ್ತದೆ. ಬೇವಿನಲ್ಲಿ ಪಿತ್ತರಸ ಲವಣಗಳು, ಫಾಸ್ಪೋಲಿಪಿಡ್ಗಳು, ಕೊಲೆಸ್ಟ್ರಾಲ್, ಎಲೆಕ್ಟೋಲೈಟ್ಗಳು ಸೇರಿದಂತೆ ನೀರಿನಾಂಶ ಹೊಂದಿವೆ.
ವೈಜ್ಞಾನಿಕ ಕಾರಣ ಬೆಲ್ಲ
ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶಗಳು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೆಸಿಯಮ್, ಪೊಟ್ಯಾಶಿಯಂ ಅಪಾರವಾಗಿರುತ್ತದೆ. ಬೆಲ್ಲ ಸೇವಿಸಿದರೆ ತೂಕ ನಷ್ಟದ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಬೆಲ್ಲದಲ್ಲಿರುವ ಪೊಟ್ಯಾಶಿಯಂ ಚಯಾಪಚಯವನ್ನು ಉತ್ತಮಗೊಳಿಸಿ, ದೇಹವನ್ನು ಚೈತನ್ಯವಾಗಿರಿಸುತ್ತದೆ.