ಮಂಡ್ಯ: ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎನ್ನುವ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಈ ನಡುವೆಯೇ ಸಂಸದೆ ಸುಮಲತಾ ಅವರು ಮಾತಿನ ಮಧ್ಯೆ ನಟ, ರಾಜಕಾರಣಿ ದಿವಂಗತ ಅಂಬರೀಶ್ ಮುಂದೆ ಯಾರೆಲ್ಲಾ ಕೈ ಕಟ್ಟಿ ನಿಲ್ತಿದ್ರು ಎಂದು ತಮಗೆ ಗೊತ್ತಿದೆ. ನಟ ಅಂಬರೀಶ್ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದರು.
ಈಗ, ಈ ಮಾತಿಗೆ ಪುಷ್ಟಿ ಎಂಬಂತೆ ಸಂಸದೆ ಸುಮಲತಾ ಬೆಂಬಲಿಗರು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ಅಂಬರೀಶ್ ಅವರ ಎದುರಿಗೆ ಎಚ್ ಡಿ ಕುಮಾರಸ್ವಾಮಿ ಅವರು ಕೈಕಟ್ಟಿ ನಿಂತುಕೊಂಡಿದ್ದು, ‘ಹುಲಿಯ ಮುಂದೆ ಇಲಿಯಂತೆ ನಿಂತವರು ಯಾರು’ ಎಂದು ಸಂಸದೆ ಸುಮಲತಾ ಬೆಂಬಲಿಗರು ಪ್ರಶ್ನಿಸಿದ್ದಾರೆ.