ಬಳ್ಳಾರಿ: ಆತ್ಮ ನಿರ್ಭರ ಭಾರತ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅನುಷ್ಠಾನವನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಿದ್ದು, ಬಳ್ಳಾರಿ ಜಿಲ್ಲೆಗೆ ಅಂಜೂರ ಬೆಳೆಯು ಆಯ್ಕೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕಾಗಿ ಅಂಜೂರ ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಚಾಲ್ತಿಯಲ್ಲಿರುವ ಅಥವಾ ನೂತನ ಉದ್ದಿಮೆ ಕೈಗೊಳ್ಳುವ ಸ್ವ-ಸಹಾಯ ಸಂಘ/ರೈತ ಉತ್ಪಾದಕ ಸಂಸ್ಥೆ/ವೈಯಕ್ತಿಕ ಉದ್ದಿಮೆದಾರರಿಗೆ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಹಾಯಧನ 10 ಲಕ್ಷ ರೂ. ಗರಿಷ್ಠ ಮಿತಿ ಇದ್ದು, ಪ್ರತಿ ಸಂಸ್ಥೆಯ ಪಾಲು ಕನಿಷ್ಠ ಶೇ.10 ರಷ್ಟು ಇರಬೇಕು ಮತ್ತು ಬಾಕಿ ಬ್ಯಾಂಕಿನ ಸಾಲ ಹಾಗೂ ತರಬೇತಿಗೆ ಬೆಂಬಲ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಯೋಜನೆಯಡಿ ಒಂದು ಜಿಲ್ಲೆಗೆ ಒಂದು ಉತ್ಪನ್ನಕ್ಕೆ (ಓ.ಡಿ.ಓ.ಪಿ) ಅಂಜೂರ ಬೆಳೆಯು ಆಯ್ಕೆಯಾಗಿದ್ದರೂ ಸಹ ಇನ್ನಿತರೆ ಬೆಳೆಗಳ ಸಂಸ್ಕರಣೆಯಡಿ ಚಾಲ್ತಿ ಇರುವ ಅಥವಾ ನೂತನವಾಗಿ ಪ್ರಾರಂಭಿಸುವ ಸ್ವ-ಸಹಾಯ ಸಂಘ/ರೈತ ಉತ್ಪಾದಕ ಸಂಸ್ಥೆ/ವೈಯಕ್ತಿಕ ಉದ್ದಿಮೆದಾರರೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಬಳ್ಳಾರಿಗೆ ಅರ್ಜಿ ಸಲ್ಲಿಸಬಹುದು.
ಅಂಜೂರ ಬೆಳೆಯ ಸಂಸ್ಕರಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳ ವಿಸ್ತರಣೆಗೆ ಸಹ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.




