ದಾವಣಗೆರೆ: ನಿಗೂಢ ಜ್ವರಕ್ಕೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕನಕಟ್ಟೆ ಗ್ರಾಮದ ನಿವಾಸಿಗಳು ತತ್ತರಿಸಿದ್ದು, ಕಳೆದ ಒಂದು ವಾರದಿಂದ 250ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ.
ಹೌದು, ತಲೆನೋವು, ಮೈ-ಕೈ ನೋವು ಮತ್ತು ವಿಪರೀತ ಜ್ವರದಿಂದ ಬಳಲುತ್ತಿರುವ ಜನರು ಪ್ರತಿನಿತ್ಯ ಜಗಳೂರು, ದಾವಣಗೆರೆಯ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ನುರಿತ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ, ಕ್ಯಾಂಪ್ ಹಾಕಿ ಚಿಕಿತ್ಸೆ ನೀಡಬೇಕು. ಆದರೆ, ಈವರೆಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ವೈದ್ಯರಾಗಲೀ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಗ್ರಾಮದಲ್ಲಿನ ಅರ್ಧದಷ್ಟು ಜನ ಈ ನಿಗೂಢ ಜ್ವರದಿಂದ ಹಾಸಿಗೆ ಹಿಡಿದಿದ್ದು, ಈ ಜ್ವರ ಹೇಗೆ ಬಂದಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಅರೋಗ್ಯ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ, ಈ ಜ್ವರ ಕುಡಿಯುವ ನೀರಿನ, ಸೊಳ್ಳೆ ಸಮಸ್ಯೆ ಅಥವಾ ವಾತಾವರಣ ಸಮಸ್ಯೆಯ ಎಂದುದನ್ನು ಕಂಡುಹಿಡಿದು ಮಾಹಿತಿ ನೀಡಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.




