ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಅವರ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಕುರಿತು ಪ್ರತಿಕ್ರಿಯೆ ನೀಡಿರುವ ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೋವಿಡ್ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿರುವುದು ಅಸಹ್ಯ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೆಲ ದಿನಗಳಿಂದ ರಾಜಕೀಯ ವಿದ್ಯಮಾನಗಳ ಬಿರುಗಾಳಿ ಎದ್ದಿದ್ದು, ಈ ಕುರಿತು ಶಾಸಕ ಎಂ.ಪಿ.ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಆಶ್ರಯದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಡೀ ರಾಜ್ಯ ಕೋವಿಡ್ ಸಂಕಷ್ಟದಲ್ಲಿದೆ. ಜನರ ಕಷ್ಟಕ್ಕೆ ನಾವು ಸ್ಪಂದಿಸಿ ಕೆಲಸ ಮಾಡಬೇಕು. ಆದರೆ ಸಿಎಂ ಬದಲಾವಣೆಯ ಊಹಾಪೋಹ ವಿಚಾರದಲ್ಲಿ ಕೆಲವರು ರಾಜಕಾರಣ ಮಾಡುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಟಿವಿ೯ ಗೆ ಪ್ರತಿಕ್ರಿಂಯೆ ನೀಡುವಾಗ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಲದ ಮರದಂತೆ ಅಗಾಧವಾಗಿ ಬೆಳೆದ ನಾಯಕ. ಅವರ ಆಶ್ರಯದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ವಿರೋಧಿಗಳು ರಾಜಕಾರಣ ಬಿಟ್ಟು ಕರೋನಾ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ ಕೆಲಸ ಮಾಡಲಿ. ನಾನು ಮೂರು ದಿನಗಳಿಂದ ಕೋವಿಡ್ ಕೇರ್ ಸೆಂಟರ್ ನಲ್ಲೇ ವಾಸ್ತವ್ಯ ಹೂಡಿ ಜನರ ಆರೋಗ್ಯ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಅನಗತ್ಯ ರಾಜಕೀಯದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ಸಲಹೆ ನೀಡಿದರು.