ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿರುವ 2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ಅನ್ನದಾತನಿಗೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಬೃಹತ್ ಘೋಷಣೆಗಳನ್ನು ಮಾಡಿದ್ದಾರೆ. ಕೃಷಿ ಸಾಲ ಮತ್ತು ಗಂಗಾ ಕಲ್ಯಾಣ ಯೋಜನೆಯ ಸಬ್ಸಿಡಿ ವಿಚಾರದಲ್ಲಿ ಸರ್ಕಾರ ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಬಜೆಟ್ನ ರೈತ ಪರ ಘೋಷಣೆಗಳು:
- ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ವಿದ್ಯುದ್ದೀಕರಣ ಸಹಾಯಧನ ₹1,50,000ಕ್ಕೆ ಏರಿಕೆ.
- 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ವಿತರಣೆಯ ಗುರಿ.
- ಒಟ್ಟು ₹30,000 ಕೋಟಿ ಮೊತ್ತದ ಸಾಲ ವಿತರಿಸಲು ಸರ್ಕಾರದ ತೀರ್ಮಾನ.
ಗಂಗಾ ಕಲ್ಯಾಣ ಯೋಜನೆ: ಸಬ್ಸಿಡಿ ಡಬಲ್!
ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲಿನ ಆಶಾಕಿರಣವಾಗಿರುವ ‘ಗಂಗಾ ಕಲ್ಯಾಣ ಯೋಜನೆ’ಯಡಿ ಮಹತ್ವದ ಬದಲಾವಣೆ ತರಲಾಗಿದೆ. ಈ ಹಿಂದೆ ಕೊಳವೆಬಾವಿ ವಿದ್ಯುದ್ದೀಕರಣಕ್ಕಾಗಿ ನೀಡಲಾಗುತ್ತಿದ್ದ 75,000 ರೂಪಾಯಿಗಳ ಸಹಾಯಧನವನ್ನು ಈಗ ನೇರವಾಗಿ 1,50,000 ರೂಪಾಯಿಗಳಿಗೆ (ಒಂದೂವರೆ ಲಕ್ಷ) ಏರಿಕೆ ಮಾಡಲಾಗಿದೆ. ಇದರಿಂದಾಗಿ ರೈತರು ಸುಲಭವಾಗಿ ವಿದ್ಯುತ್ ಸಂಪರ್ಕ ಪಡೆದು ನೀರಾವರಿ ಸೌಲಭ್ಯ ಹೊಂದಲು ಅನುಕೂಲವಾಗಲಿದೆ.
30,000 ಕೋಟಿ ರೂಪಾಯಿ ಕೃಷಿ ಸಾಲದ ಗುರಿ
ಕೃಷಿ ಚಟುವಟಿಕೆಗಳಿಗೆ ಬಂಡವಾಳದ ಕೊರತೆಯಾಗದಂತೆ ತಡೆಯಲು ಸರ್ಕಾರ ಬೃಹತ್ ಮೊತ್ತದ ಸಾಲ ವಿತರಣೆಯ ಗುರಿಯನ್ನು ಹಾಕಿಕೊಂಡಿದೆ. ರಾಜ್ಯದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ (Zero Percent Interest) ಕೃಷಿ ಸಾಲ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಬರೋಬ್ಬರಿ 30,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಮೀಸಲಿಡಲಾಗಿದೆ.
ಬಜೆಟ್ನ ಈ ನಿರ್ಧಾರಗಳಿಂದಾಗಿ ಕೃಷಿ ವಲಯದಲ್ಲಿ ಹೊಸ ಚೈತನ್ಯ ಮೂಡಲಿದ್ದು, ರಾಜ್ಯದ ಲಕ್ಷಾಂತರ ರೈತ ಕುಟುಂಬಗಳಿಗೆ ಇದರಿಂದ ನೇರ ಲಾಭವಾಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




