ಮ್ಯಾಂಚೆಸ್ಟರ್: ರಿಷಭ್ ಪಂತ್ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಅದ್ಭುತ ಆಲ್ರೌಂಡರ್ ಪ್ರದರ್ಶನದಿಂದ ಭಾರತ ತಂಡವು ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ಗಳಿಂದ ಗೆದ್ದು, 2-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಜೋಸ್ ಬಟ್ಲರ್ 60 ರನ್, ಜೇಸನ್ ರಾಯ್ 41, ಮೊಯಿನ್ ಅಲಿ 34 ಹಾಗೂ ಕ್ರೇಗ್ ಓವರ್ಟನ್ 32 ರನ್ ಸಹಾಯದಿಂದ 45.5 ಓವರ್ಗಳಲ್ಲಿ 259 ಗಳಿಸಿ ಆಲೌಟ್ ಆಯಿತು. ಇನ್ನು, ಭಾರತದ ಪರ ಹಾರ್ದಿಕ್ ಪಾಂಡ್ಯ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ, 7 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 3 ಮೆಡನ್ ಓವರ್ ಜೊತೆಗೆ 4 ವಿಕೆಟ್ ಉರುಳಿಸಿ ಮಿಂಚಿದ್ದರು. ಉಳಿದಂತೆ ಯಜುವೇಂದ್ರ ಚಹಾಲ್ 3 ವಿಕೆಟ್, ಮೊಹಮ್ಮದ್ ಸಿರಾಜ್ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡಿದ್ದರು.
ಬಳಿಕ ಗೆಲ್ಲಲು ಆಂಗ್ಲರು ನೀಡಿದ 260 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡವು 42.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ 5 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತದ ಪರ ರಿಷಭ್ ಪಂತ್ ಅಜೇಯ 125 ರನ್ ಹಾಗೂ ಹಾರ್ದಿಕ್ ಪಾಂಡ್ಯ 71 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರೂ. ಇಂಗ್ಲೆಂಡ್ ಪರ ರೀಸ್ ಟಾಪ್ಲೆ 3, ಓವರ್ಟನ ಮತ್ತು ಕೇರ್ಸ್ ತಲಾ 1 ಪಡೆದರು.
ಇನ್ನು ಬ್ಯಾಟಿಂಗ್ ನಿಂದ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಕಾರಣರಾದ ರಿಷಬ್ ಪಂಥ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರದರೇ, ಸರಣಿಯೂದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.