ಚಿಕ್ಕಮಗಳೂರು : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದ್ದು, ಅದಾಗ್ಯೂ ನಮ್ಮ ಮಂದಿ ಮಾತ್ರ ಮದುವೆ ಮಾಡುವುದು ಬಿಟ್ಟಿಲ್ಲ.
ಹೀಗೆ ಕೋವಿಡ್ ನಿಯಮ ಮೀರಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಈ ವೇಳೆ ಕಕ್ಕಾಬಿಕ್ಕಿಯಾದ ವರ ವಧುವನ್ನು ವೇದಿಕೆ ಮೇಲೆ ಬಿಟ್ಟು ಎಸ್ಕೇಫ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಇನ್ನು, ಈ ಮದುವೆಗೆ ಮನೆಯವರು ಸ್ಥಳೀಯವಾಗಿ ಪರವಾನಗಿ ಪಡೆದಿದ್ದು, ಕೇವಲ ಹತ್ತು ಜನರಿಗೆ ಮಾತ್ರ ಸೇರಿಸಲು ಅನುಮತಿ ಸಿಕ್ಕಿತ್ತು. ಆದರೆ ಮದುವೆಯಲ್ಲಿ ನೂರಾರು ಜನರು ಭಾಗಿಯಾಗಿದ್ದು, ಈ ವಿಚಾರ ತಿಳಿದು ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮದುವೆಗೆ ಬಂದ ಅಧಿಕಾರಿಗಳನ್ನು ಕಂಡು ವಧುವನ್ನು ವೇದಿಕೆಯಲ್ಲೇ ಬಿಟ್ಟು ವರ ಓಡಿ ಹೋಗಿದ್ದಾನೆ.
ಇತ್ತ ಅಧಿಕಾರಿಗಳನ್ನು ಕಂಡ ಜನರು ಕಾಲ್ಕಿತ್ತಿದ್ದು, ಇತ್ತ ಊಟಕ್ಕೆ ಕುಳಿತಿದ್ದವರು ಕೂಡಾ ಭರ್ಜರಿ ಭೋಜನವನ್ನೂ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾರೆ.